ನೇಪಾಳ ಪ್ರವಾಹ: ಮೃತರ ಸಂಖ್ಯೆ 160ಕ್ಕೆ ಏರಿಕೆ
ಕನಿಷ್ಠ 133 ಭಾರತೀಯರು ಸೇರಿದಂತೆ ಹಲವು ದೇಶಗಳ 579 ಮಂದಿ ನಾಪತ್ತೆ

Photo: x.com/washingtonpost
ಕಾಠ್ಮಂಡು : ನೇಪಾಳ–ಟಿಬೆಟ್ ಗಡಿ ಭಾಗದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ನೀರಿನ ಮಟ್ಟ ಸುಮಾರು 30 ಅಡಿಗಳಷ್ಟು ಏರಿಕೆಯಾಗಿದೆ. ಘಟನೆಯಲ್ಲಿ ಕನಿಷ್ಠ 160 ಮಂದಿ ಮೃತಪಟ್ಟಿದ್ದು, ಭಾರತದ ಕೈಲಾಸ ಮಾನಸ ಸರೋವರ ಯಾತ್ರಿಕರು ಸೇರಿದಂತೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ಪ್ರವಾಹದ ರಭಸಕ್ಕೆ ವಸತಿ ಪ್ರದೇಶಗಳು, ಜಲವಿದ್ಯುತ್ ಘಟಕಗಳು ಹಾಗೂ ಯಾತ್ರಾ ಮಾರ್ಗಗಳು ಕೊಚ್ಚಿಹೋಗಿವೆ.
ನೇಪಾಳ ಪೊಲೀಸರು ಮೃತರ ಸಂಖ್ಯೆ 157 ಎಂದು ವರದಿ ಮಾಡಿದ್ದಾರೆ. ಚೀನಾ ಅಧಿಕಾರಿಗಳ ವರದಿ ಪ್ರಕಾರ, ಟಿಬೆಟ್ ನ ಗೈರಾಂಗ್ ಕೌಂಟಿಯಲ್ಲಿ 3 ಮಂದಿ ಮೃತಪಟ್ಟಿದ್ದು, 265 ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ, ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ ಒಟ್ಟು 160 ಮಂದಿ ಮೃತಪಟ್ಟಿದ್ದಾರೆ.
ನೇಪಾಳ ಪೊಲೀಸರ ಪ್ರಕಾರ, 466 ವಿದೇಶಿಯರು ಹಾಗೂ 113 ಸ್ಥಳೀಯರು ಸೇರಿ ಒಟ್ಟು 579 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಭಾರತೀಯರು ಮತ್ತು 37 ಅನಿವಾಸಿ ಭಾರತೀಯರು (NRI) ಸೇರಿದ್ದಾರೆ.
ನಾಪತ್ತೆಯಾದ ವಿದೇಶಿಯರಲ್ಲಿ 54 ಅಮೆರಿಕನ್ನರು, 34 ಆಸ್ಟ್ರೇಲಿಯನ್ನರು, 33 ಬ್ರಿಟಿಷರು, 24 ಕೆನಡಿಯನ್ನರು, 19 ಮಲೇಷಿಯನ್ನರು ಹಾಗೂ 8 ಕೊರಿಯನ್ನರು ಸೇರಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಹೆಚ್ಚಿನವರು ಕೈಲಾಸ ಮಾನಸ ಸರೋವರ ಯಾತ್ರಿಕರಾಗಿದ್ದು, ಭಾರತೀಯರೂ ಸೇರಿದಂತೆ ಸುಮಾರು 400 ಮಂದಿ ನೇಪಾಳ-ಟಿಬೆಟ್ ಗಡಿ ದಾಟಲು ಸಿದ್ಧತೆ ನಡೆಸುತ್ತಿದ್ದ ವೇಳೆ ಪ್ರವಾಹಕ್ಕೆ ಸಿಲುಕಿದ್ದಾರೆ.
ರಸುವಾದಲ್ಲಿ ಪ್ರವಾಹಕ್ಕೆ ಬ್ಯಾರಕ್ ಗಳು ಕೊಚ್ಚಿಹೋದ ಪರಿಣಾಮ 29 ಪೊಲೀಸ್ ಸಿಬ್ಬಂದಿ ಹಾಗೂ 44 ಯೋಧರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಗಡಿ ಭಾಗದಲ್ಲಿ ಕರ್ತವ್ಯದಲ್ಲಿದ್ದ ಕಸ್ಟಮ್ಸ್ ಅಧಿಕಾರಿಗಳು ಹಾಗೂ ಜಲವಿದ್ಯುತ್ ಯೋಜನೆಯ ನೌಕರರೂ ಪ್ರವಾಹದಲ್ಲಿ ಸಿಲುಕಿದ್ದಾರೆ.
ಪ್ರವಾಹದಿಂದ ಭಾರೀ ಹಾನಿ
20 ಮೆಗಾವಾಟ್ ಸಾಮರ್ಥ್ಯದ ಲಂಗ್ಟಾಂಗ್ ಖೋಲಾ ಜಲವಿದ್ಯುತ್ ಯೋಜನೆಯ ಹತ್ತಾರು ಸಿಬ್ಬಂದಿಯ ಸಂಪರ್ಕ ಕಡಿತಗೊಂಡಿದ್ದು, ನದಿ ತೀರದಲ್ಲಿದ್ದ ಭದ್ರತಾ ಚೌಕಿಗಳು, ಕಸ್ಟಮ್ಸ್ ಕಚೇರಿಗಳು ಹಾಗೂ ಬ್ಯಾಂಕುಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ ಅಥವಾ ಕೊಚ್ಚಿಹೋಗಿವೆ ಎಂದು ವರದಿಯಾಗಿದೆ.
ಉತ್ತರ ಮತ್ತು ಮಧ್ಯ ನೇಪಾಳದಾದ್ಯಂತ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಪ್ರಮುಖ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕನಿಷ್ಠ 19 ಸೇತುವೆಗಳು ಮತ್ತು ಸುಮಾರು 40 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿದ್ದು, ಹಲವು ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ.
ಇನ್ನು 13 ಜಲವಿದ್ಯುತ್ ಯೋಜನೆಗಳಿಗೆ ಹಾನಿಯಾಗಿದ್ದು, ಸುಮಾರು 200 ಟ್ರಕ್ ಗಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿವೆ. ಹೆಚ್ಚು ಹಾನಿಗೊಳಗಾದ ಪ್ರದೇಶಗಳನ್ನು ಮುಂದಿನ 3 ತಿಂಗಳ ಕಾಲ ‘ವಿಪತ್ತು ಪೀಡಿತ ಪ್ರದೇಶ’ ಎಂದು ನೇಪಾಳ ಸರ್ಕಾರ ಘೋಷಿಸಿದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸರ್ಕಾರ ಆದೇಶಿಸಿದೆ.
ಒಗ್ಗಟ್ಟಿಗೆ ಪ್ರಧಾನಿ ಕರೆ
ನೇಪಾಳ ಪ್ರಧಾನಿ ಬಾಲೆನ್ ಶಾ ಅವರು ಜನರಲ್ಲಿ ಶಾಂತಿ ಮತ್ತು ಒಗ್ಗಟ್ಟಿನಿಂದ ಇರುವಂತೆ ಕರೆ ನೀಡಿದ್ದು, ನೇಪಾಳ ಸೇನೆ, ನೇಪಾಳ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆಗಳು ಹೆಲಿಕಾಪ್ಟರ್ ಗಳು, ಡ್ರೋನ್ ಗಳು, ದೋಣಿಗಳು ಮತ್ತು ಭೂ ತಂಡಗಳ ಮೂಲಕ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.






