ನೇಪಾಳ: ಕರೆನ್ಸಿ ನೋಟಿನಲ್ಲಿ ಭಾರತದ ನಕ್ಷೆಯ ಚಿತ್ರ ಟೀಕಿಸಿದ್ದ ಅಧ್ಯಕ್ಷರ ಆರ್ಥಿಕ ಸಲಹೆಗಾರ ರಾಜೀನಾಮೆ
ಕಠ್ಮಂಡು: ಭಾರತದ ಮೂರು ಪ್ರದೇಶಗಳ ನಕ್ಷೆಯನ್ನು ಹೊಂದಿರುವ 100 ರೂ. ನೋಟುಗಳನ್ನು ಮುದ್ರಿಸುವ ನೇಪಾಳ ಸರಕಾರದ ಕ್ರಮವನ್ನು ಟೀಕಿಸಿದ್ದ ಅಧ್ಯಕ್ಷರ ಆರ್ಥಿಕ ಸಲಹೆಗಾರ ಚಿರಂಜೀವಿ ನೇಪಾಳ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.
ಅಧ್ಯಕ್ಷ ರಾಮ್ಚಂದ್ರ ಪೌದೆಲ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಹೇಳಿದೆ. ಓರ್ವ ಆರ್ಥಿಕ ತಜ್ಞನಾಗಿ ಮತ್ತು ಸೆಂಟ್ರಲ್ ಬ್ಯಾಂಕ್ನ ಮಾಜಿ ಗವರ್ನರ್ ಆಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಆದರೆ ಮಾಧ್ಯಮಗಳು ಅನಗತ್ಯವಾಗಿ ಈ ಹೇಳಿಕೆಯನ್ನು ತಿರುಚಿ ಈ ವಿವಾದದಲ್ಲಿ ಗೌರವಾನ್ವಿತ ಅಧ್ಯಕ್ಷರನ್ನು ಸೇರಿಸಲು ಪ್ರಯತ್ನಿಸಿರುವುದರಿಂದ ಬೇಸತ್ತು ರಾಜೀನಾಮೆಯ ನಿರ್ಧಾರಕ್ಕೆ ಬಂದಿರುವುದಾಗಿ ಚಿರಂಜೀವಿ ನೇಪಾಳ ಪ್ರತಿಕ್ರಿಯಿಸಿದ್ದಾರೆ.
ಈ ವಿವಾದಾತ್ಮಕ ಪ್ರದೇಶಗಳ ಬಗ್ಗೆ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಕ್ರಮಗಳಿಂದ ದೇಶಕ್ಕೆ ಮತ್ತು ಜನರಿಗೆ ಪ್ರಾಯೋಗಿಕ ಸಮಸ್ಯೆಗಳು ಎದುರಾಗಬಹುದು ಎಂದು ಜಾಗೃತ ನಾಗರಿಕನ ನೆಲೆಯಲ್ಲಿ ಹೇಳಿಕೆ ನೀಡಿದ್ದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಮಾಜಿ ಪ್ರಧಾನಿ ಕೆಪಿ ಶರ್ಮ ಒಲಿ ಅವರು ಚಿರಂಜೀವಿ ನೇಪಾಳ ಅವರ ಹೇಳಿಕೆಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರು. ಸರಕಾರದ ನಿರ್ಧಾರದ ವಿರುದ್ಧ ಹೇಳಿಕೆ ನೀಡಿದ್ದ ಚಿರಂಜೀವಿಯನ್ನು ವಜಾಗೊಳಿಸಬೇಕೆಂದು ಹಲವು ಸಂಘಟನೆಗಳು ಆಗ್ರಹಿಸಿದ್ದವು. ನೇಪಾಳ ಸರಕಾರ ಮುದ್ರಿಸುವ 100 ರೂ. ನೋಟಿನಲ್ಲಿರುವ ಹೊಸ ನಕ್ಷೆಯಲ್ಲಿ ಕಾಲಾಪಾನಿ, ಲಿಪುಲೆಖ್ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ಸೇರಿಸಿದ್ದು ಇವು ತನ್ನ ಭೂಭಾಗ ಎಂದು ಭಾರತ ಪುನರುಚ್ಚರಿಸಿದೆ.