ನೇಪಾಳದ ಮಧ್ಯಂತರ ಸರಕಾರದ ಮುಖ್ಯಸ್ಥರಾಗಿ ಸುಶೀಲಾ ಕರ್ಕಿ ಆಯ್ಕೆ

Photo | indiatoday
ಕಠ್ಮಂಡು : ನೇಪಾಳದ ಮಧ್ಯಂತರ ಸರಕಾರದ ಮುಖ್ಯಸ್ಥರಾಗಿ ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿಯವರನ್ನು ಜನ್ ಝಡ್ ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.
ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಕುರಿತು ಜನ ಝಡ್ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ್ದೇನೆ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹೇಳಿದ್ದಾರೆ.
ಹಿಂಸಾತ್ಮಕ ಪ್ರತಿಭಟನೆಗಳ ನಂತರ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಕಠ್ಮಂಡು ಮೇಯರ್ ಬಾಲೆನ್ ಶಾ ಅವರ ಹೆಸರು ಮುನ್ನೆಲೆಗೆ ಬಂದರೂ ಅವರನ್ನು ಸಂಪರ್ಕಿಸಲು ಪದೇ ಪದೇ ಮಾಡಿದ ಪ್ರಯತ್ನಗಳಿಗೆ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಹೇಳಲಾಗಿದೆ. ಅವರು ನಮ್ಮ ಕರೆಗಳನ್ನು ಸ್ವೀಕರಿಸದ ಕಾರಣ, ಚರ್ಚೆ ಬೇರೆ ಹೆಸರುಗಳಿಗೆ ಬದಲಾಯಿತು. ಹೆಚ್ಚಿನ ಬೆಂಬಲ ಸುಶೀಲಾ ಕರ್ಕಿ ಅವರಿಗೆ ಬಂದಿದೆ ಎಂದು ಜನ್ ಝಡ್ ಪ್ರತಿನಿಧಿಯೊಬ್ಬರು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಈ ಆಂದೋಲನ ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ, ಬದಲಾಗಿ ಇಡೀ ಪೀಳಿಗೆ ಮತ್ತು ರಾಷ್ಟ್ರದ ಭವಿಷ್ಯಕ್ಕಾಗಿದೆ. ಇದಕ್ಕಾಗಿ ಶಾಂತಿ ಅತ್ಯಗತ್ಯ, ಆದರೆ ಅದು ಹೊಸ ರಾಜಕೀಯ ವ್ಯವಸ್ಥೆಯ ಅಡಿಪಾಯದ ಮೇಲೆ ಮಾತ್ರ ಸಾಧ್ಯ ಎಂದು ಪ್ರತಿಭಟನಾಕಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





