ಕೈದಿಯನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ದಾಳಿ | ಇಬ್ಬರು ಭದ್ರತಾ ಸಿಬ್ಬಂದಿ ಸಾವು, ಕೈದಿ ಪರಾರಿ
![ಕೈದಿಯನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ದಾಳಿ | ಇಬ್ಬರು ಭದ್ರತಾ ಸಿಬ್ಬಂದಿ ಸಾವು, ಕೈದಿ ಪರಾರಿ ಕೈದಿಯನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ದಾಳಿ | ಇಬ್ಬರು ಭದ್ರತಾ ಸಿಬ್ಬಂದಿ ಸಾವು, ಕೈದಿ ಪರಾರಿ](https://www.varthabharati.in/h-upload/2024/05/15/1266775-crime.webp)
ಪ್ಯಾರಿಸ್ : ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ನ ಮೇಲೆ ನಡೆದ ಹೊಂಚುದಾಳಿಯಲ್ಲಿ ಆರೋಪಿಯ ಭದ್ರತೆಗೆ ನಿಯೋಜಿಸಿದ್ದ ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
`ನೊಣ' ಎಂಬ ಹೆಸರಿನಿಂದ ಕುಖ್ಯಾತನಾಗಿರುವ 30 ವರ್ಷದ ಮುಹಮ್ಮದ್ ಅಮ್ರಾ ಉತ್ತರ ಫ್ರಾನ್ಸ್ ನಲ್ಲಿ ಮಾದಕವಸ್ತುಗಳ ಸಾಗಣೆ ಮತ್ತು ಮಾರಾಟ ಜಾಲದ ಪ್ರಮುಖನಾಗಿದ್ದ. ಹೊಂಚು ದಾಳಿಯಲ್ಲಿ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದು ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾದಕವಸ್ತು ಮಾರಾಟ, ದರೋಡೆ, ಹಣಕ್ಕಾಗಿ ಅಪಹರಣ ಮತ್ತು ಹತ್ಯೆ ಮುಂತಾದ ಹಲವು ಪ್ರಕರಣ ಎದುರಿಸುತ್ತಿದ್ದ ಅಮ್ರಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ವ್ಯಾನ್ನಲ್ಲಿ ಕರೆದೊಯ್ಯುತ್ತಿದ್ದಾಗ ಟೋಲ್ಬೂತ್ ಬಳಿ ಮಂಕಿಕ್ಯಾಪ್ ಧರಿಸಿದ್ದ ಬಂದೂಕುಧಾರಿಗಳಿದ್ದ ವಾಹನ ಪೊಲೀಸರ ವ್ಯಾನ್ಗೆ ಡಿಕ್ಕಿಯಾಗಿದೆ. ದುಷ್ಕರ್ಮಿಗಳು ವ್ಯಾನ್ ಮೇಲೆ ಗುಂಡಿನ ಮಳೆಗರೆದಿದ್ದು ಆರೋಪಿಯ ಭದ್ರತೆಗೆ ನಿಯೋಜಿಸಿದ್ದ ಇಬ್ಬರು ಭದ್ರತಾ ಸಿಬ್ಬಂದಿ ಹತರಾಗಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಬಳಿಕ ದುಷ್ಕರ್ಮಿಗಳು ಮುಹಮ್ಮದ್ ಅಮ್ರಾನ ಸಹಿತ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.