ರಾಜಕಾರಣಿಗಳಿಗೆ ನಿಜ್ಜಾರ್ ದೇಣಿಗೆ; ತನಿಖಾ ಪತ್ರಕರ್ತರ ವರದಿ
ಒಟ್ಟಾವ: ಖಾಲಿಸ್ತಾನಿ ಮುಖಂಡ ಹದೀಘಪ್ ಸಿಂಗ್ ನಿಜ್ಜಾರ್ ಕೆನಡಾದ ರಾಜಕಾರಣಿಗಳಿಗೆ ದೇಣಿಗೆ ನೀಡುತ್ತಿದ್ದ ಎಂದು ತನಿಖಾ ಪತ್ರಕರ್ತ ಮೋಚ ಬೆಜಿರ್ಗನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ.
ಕನಿಷ್ಕಾ ವಿಮಾನದಲ್ಲಿ ಬಾಂಬ್ಸ್ಫೋಟದ ಘಟನೆಯನ್ನು ಖಂಡಿಸಲು ನಿರಾಕರಿಸಿರುವ ಕೆನಡಾದ `ನ್ಯೂ ಡೆಮೊಕ್ರಟಿಕ್ ಪಾರ್ಟಿ(ಎನ್ಡಿಪಿ)ಯ ಮುಖಂಡ ಜಗ್ಮೀತ್ ಸಿಂಗ್ ಅವರು 2017ರಲ್ಲಿ ವಿ3ಡಬ್ಲ್ಯೂ 0ಜೆ4 ಎಂಬ ಪೋಸ್ಟಲ್ ಕೋಡ್ ಹೊಂದಿದ್ದ ನಿಜ್ಜಾರ್ ನಿಂದ ಆರ್ಥಿಕ ನೆರವು ಪಡೆದಿದ್ದಾರೆ. ಈ ಕೋಡ್ `ನಿಜ್ಜಾರ್ ಪ್ಲಂಬಿಂಗ್ ಆ್ಯಂಡ್ ಹೀಟಿಂಗ್ ಲಿ.' ಎಂಬ ಸಂಸ್ಥೆಗೆ ಸಂಬಂಧಿಸಿದೆ ಮತ್ತು ಈ ಸಂಸ್ಥೆಯಲ್ಲಿ ನಿಜ್ಜಾರ್ ಪುತ್ರ ಮೆಹ್ತಾಬ್ ನಿಜ್ಜಾರ್ ಕೆಲಸ ಮಾಡುತ್ತಿದ್ದ ಎಂದು ವರದಿ ಹೇಳಿದೆ. ನಿಜ್ಜಾರ್ ಮತ್ತು ಕೆನಡಾದ ರಾಜಕಾರಣಿಗಳು ನಿಕಟವಾಗಿ ಕೆಲಸ ಮಾಡುತ್ತಿದ್ದರು ಮತ್ತು ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ.
`ಈ ದೇಣಿಗೆಯು ಆ ದಿಕ್ಕಿನಲ್ಲಿ ಒಂದು ಸಣ್ಣ ಬಹಿರಂಗ ಪಡಿಸುವಿಕೆಯಾಗಿದೆ. ಆದರೆ ಖಾಲಿಸ್ತಾನ್ ಭಯೋತ್ಪಾದಕರು ಮತ್ತು ಕೆನಡಾ ರಾಜಕಾರಣಿಗಳು ಒಟ್ಟಾಗಿ ಕೆಲಸ ಮಾಡುವುದನ್ನು ಸೂಚಿಸುವ ಪ್ರಮುಖ ಸಾಕ್ಷ್ಯವಾಗಿದೆ. ನಿಜ್ಜಾರ್ ಕಾನೂನುಬಾಹಿರ ವ್ಯವಹಾರದಲ್ಲಿ ತೊಡಗಿದ್ದ ಮತ್ತು ಆತನಿಗೆ ಬೆದರಿಕೆಯಿತ್ತು. ಭಯೋತ್ಪಾದಕರು ರಾಜಕಾರಣಿಗಳಿಗೆ ಹಣ ನೀಡುವುದು ಅವರ ಉದ್ದೇಶದ ಸ್ಪಷ್ಟ ಸೂಚನೆಯಾಗಿದೆ. ಖಾಲಿಸ್ತಾನಿ ಪರ ಸಹಾನುಭೂತಿ ಹೊಂದಿದ್ದಾರೆ ಎನ್ನಲಾಗಿರುವ ಜಗ್ಮೀತ್ 2017ರಲ್ಲಿ ನಿಜ್ಜಾರ್ ನಿಂದ ದೇಣಿಗೆ ಪಡೆದಿದ್ದರು ಎಂದು ವರದಿ ಹೇಳಿದೆ.
ಕೆನಡಾದ ಪ್ರಜೆಯಾಗಿದ್ದ 45 ವರ್ಷದ ನಿಜ್ಜಾರ್ ನನ್ನು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಸರೆಯಲ್ಲಿ 2023ರ ಜೂನ್ 18ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.