ಒಮಾನ್ | ಅಮೆರಿಕ ದಾಳಿಯಲ್ಲಿ ಮೃತಪಟ್ಟ ಇಬ್ಬರು ನಾವಿಕರ ಪಾರ್ಥಿವ ಶರೀರ ಸ್ವದೇಶಕ್ಕೆ ; ಭಾರತೀಯ ರಾಯಭಾರಿ ಕಚೇರಿ ಮಾಹಿತಿ

Screengrab : X
ಮಸ್ಕತ್,ಜೂ.17: ಒಮಾನ್ ಕರಾವಳಿಯಾಚೆ ಸಮುದ್ರದಲ್ಲಿ ಹಡಗೊಂದರ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟ ಮೂವರು ನಾವಿಕರ ಪೈಕಿ ಇಬ್ಬರ ಪಾರ್ಥಿವ ಶರೀರಗಳನ್ನು ಬುಧವಾರ ತಾಯ್ನಾಡಿಗೆ ಕಳುಹಿಸಲಾಗಿದೆಯೆಂದು ಒಮಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬುಧವಾರ ತಿಳಿಸಿದೆ.
ಎಂ.ಟಿ.ಸೆಟ್ಟೆಬೆಲ್ಲೊ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಪ್ರಾಣಕಳೆದುಕೊಂಡ ಭಾರತೀಯ ನಾವಿಕರಾದ ಆದಿತ್ಯ ಶರ್ಮಾ ಹಾಗೂ ಶಿವಾನಂದ ಚೌರಾಸಿಯಾ ಅವರ ಪಾರ್ಥಿವ ಶರೀರದ ಅವಶೇಷಗಳನ್ನು ಭಾರತಕ್ಕೆ ಕಳುಹಿಸಿಕೊಡಲಾಗಿದೆಯೆಂದು, ಭಾರತೀಯ ರಾಯಭಾರಿ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಈ ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಹೃದಯಾಳದಿಂದ ಸಂತಾಪಗಳನ್ನು ಸೂಚಿಸುತ್ತಿದ್ದೇವೆ ಎಂದು ರಾಯಭಾರ ಕಚೇರಿ ಹೇಳಿದೆ.
ಆದರೆ ದಾಳಿಯಲ್ಲಿ ಮೃತಪಟ್ಟ ಮೂರನೇ ಭಾರತೀಯ ನಾವಿಕ ಪಟ್ನಾಲ ಸುರೇಶ್ ಮೃತದೇಹದ ಬಗ್ಗೆ ರಾಯಭಾರಿ ಕಚೇರಿಯು ಯಾವುದೇ ವಿವರಗಳನ್ನು ಒದಗಿಸಿಲ್ಲ.
ಕಳೆದ ವಾರ ಒಮಾನ್ ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ಮೂರು ವ್ಯಾಪಾರಿ ಹಡಗುಗಳ ಮೇಲೆ ಅಮೆರಿಕದ ಮೆರೈನ್ ಪಡೆಗಳು ನಡೆಸಿದ್ದವು. ಅವುಗಳಲ್ಲೊಂದಾದ ಎಂ.ಟಿ.ಸೆಟ್ಟಿಬೆಲ್ಲೊ ಹಡಗಿನಲ್ಲಿ ಮೂವರು ನಾವಿಕರು ಮೃತಪಟ್ಟರೆ, ಉಳಿದವರನ್ನು ರಕ್ಷಿಸಲಾಗಿತ್ತು.
ಈ ದಾಳಿ ಘಟನೆಯ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವ , ಅಮೆರಿಕದ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕ ಜೇಸನ್ ಮೀಕ್ಸ್ ಅವರನ್ನು ಎರಡು ಬಾರಿ ಕರೆಸಿಕೊಂಡು, ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು.






