ಶಾಂತಿಪಾಲನಾ ಸಹಕಾರ: ವಿಶ್ವಸಂಸ್ಥೆ ಅಧಿಕಾರಿಗಳೊಂದಿಗೆ ಭಾರತ ಚರ್ಚೆ

Photo Credit ; AP , PTI
ನ್ಯೂಯಾರ್ಕ್, ಎ.21: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಸಂಬಂಧಿಸಿದ ವಿಷಯದ ಕುರಿತು ವಿಶ್ವಸಂಸ್ಥೆ ಮತ್ತು ಭಾರತದ ಉನ್ನತ ಅಧಿಕಾರಿಗಳು ಮಂಗಳವಾರ ನ್ಯೂಯಾರ್ಕ್ನಲ್ಲಿ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.
ವಿದೇಶಾಂಗ ವ್ಯವಹಾರ ಇಲಾಖೆಯ ಕಾರ್ಯದರ್ಶಿ(ಪಶ್ಚಿಮ) ಸಿಬಿ ಜಾರ್ಜ್, ರಾಜಕೀಯ ಮತ್ತು ಶಾಂತಿ ನಿರ್ಮಾಣ ವ್ಯವಹಾರಗಳು ಮತ್ತು ಶಾಂತಿ ಕಾರ್ಯಾಚರಣೆಗಳ ಇಲಾಖೆಗಳಲ್ಲಿ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಪೆಸಿಫಿಕ್ನ ಸಹಾಯಕ ಕಾರ್ಯದರ್ಶಿ ಖಲೀದ್ ಖಿಯಾರಿ ಉಪಸ್ಥಿತಿಯಲ್ಲಿ ಮಾತುಕತೆ ನಡೆದಿದೆ. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರೀಕರಿಸಿ ಫಲಪ್ರದ ಮಾತುಕತೆ ನಡೆಸಲಾಗಿದೆ ಎಂದು ವಿಶ್ವಸಂಸ್ಥೆಯ ಮೂಲಗಳು ಹೇಳಿವೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಅತ್ಯಧಿಕ ಕೊಡುಗೆ ನೀಡುವ ದೇಶಗಳಲ್ಲಿ ಭಾರತವೂ ಸೇರಿದೆ. 1948ರಿಂದ ವಿಶ್ವಸಂಸ್ಥೆಯ ಧ್ವಜದಡಿ ವಿಶ್ವದಾದ್ಯಂತ ನಡೆಯುವ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತದ ಸುಮಾರು 2,75,000 ಯೋಧರು ಪಾಲ್ಗೊಂಡಿದ್ದಾರೆ. ಪ್ರಸ್ತುತ ವಿಶ್ವಸಂಸ್ಥೆಯ 12 ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಭಾರತದ ಸುಮಾರು 5,900 ಸೈನಿಕರು ಪಾಲ್ಗೊಂಡಿದ್ದಾರೆ.




