ಲೆಬನಾನ್ನಲ್ಲಿ ಮೇರಿ ಮಾತೆಯ ಪ್ರತಿಮೆಗೆ ಅವಮಾನ: ಇಸ್ರೇಲಿ ಸೈನಿಕನ ವಿರುದ್ಧ ತನಿಖೆ

Photo credit: aljazeera.com
ಬೈರುತ್: ದಕ್ಷಿಣ ಲೆಬನಾನ್ನ ಡೆಬೆಲ್ ಗ್ರಾಮದಲ್ಲಿ ಇಸ್ರೇಲಿ ಸೈನಿಕನೊಬ್ಬ ಮೇರಿ ಮಾತೆಯ ಪ್ರತಿಮೆಗೆ ಅವಮಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಇಸ್ರೇಲ್ ಸೇನೆ ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.
ಕ್ರಿಶ್ಚಿಯನ್ ಬಹುಸಂಖ್ಯಾತರು ವಾಸಿಸುವ ಡೆಬೆಲ್ ಗ್ರಾಮದಲ್ಲಿ ಕೆಲ ವಾರಗಳ ಹಿಂದೆ ಈ ಫೋಟೋ ತೆಗೆದಿರುವುದಾಗಿ ತಿಳಿದುಬಂದಿದೆ. ಆದರೆ ಅದು ಬುಧವಾರ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಫೋಟೋದಲ್ಲಿ ಸೈನಿಕನೊಬ್ಬ ಮೇರಿ ಮಾತೆಯ ಪ್ರತಿಮೆಯ ಬಾಯಿಗೆ ಸಿಗರೇಟ್ ಇಟ್ಟು, ತಾನೂ ಸಿಗರೇಟ್ ಸೇದುತ್ತಿರುವುದು ಕಾಣಿಸಿದೆ.
‘ಟೈಮ್ಸ್ ಆಫ್ ಇಸ್ರೇಲ್’ ವರದಿ ಪ್ರಕಾರ, ಘಟನೆಯನ್ನು ಇಸ್ರೇಲ್ ಸೇನೆ “ಗಂಭೀರವಾಗಿ” ಪರಿಗಣಿಸಿದ್ದು, ಸಂಬಂಧಿತ ಸೈನಿಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲಿ ಸೈನಿಕರು ಧಾರ್ಮಿಕ ಸ್ಥಳಗಳಿಗೆ ಹಾನಿ ಮಾಡಿರುವುದು, ಸಾರ್ವಜನಿಕ ಆಸ್ತಿಗಳನ್ನು ಧ್ವಂಸಗೊಳಿಸಿರುವುದು ಮತ್ತು ಲೂಟಿ ನಡೆಸಿರುವ ಆರೋಪಗಳು ಈ ಹಿಂದೆಯೂ ಕೇಳಿಬಂದಿವೆ.
ಕಳೆದ ತಿಂಗಳು ಇದೇ ಡೆಬೆಲ್ ಗ್ರಾಮದಲ್ಲಿ ಯೇಸುವಿನ ಪ್ರತಿಮೆಯನ್ನು ಹಾನಿಗೊಳಿಸುತ್ತಿರುವ ಮತ್ತೊಬ್ಬ ಸೈನಿಕನ ಫೋಟೋ ವೈರಲ್ ಆಗಿತ್ತು. ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಸೈನಿಕರನ್ನು ಯುದ್ಧ ಕರ್ತವ್ಯದಿಂದ ತೆಗೆದುಹಾಕಿ 30 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಲೆಬನಾನ್ ಮಾಧ್ಯಮಗಳ ಪ್ರಕಾರ, ಡೆಬೆಲ್ ಗ್ರಾಮದಲ್ಲಿ ನೀರಿನ ವ್ಯವಸ್ಥೆಗೆ ಅಗತ್ಯವಿದ್ದ ಸೌರ ಫಲಕಗಳನ್ನು ಇಸ್ರೇಲಿ ಪಡೆಗಳು ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿದ್ದಲ್ಲದೆ, ಮನೆಗಳು, ರಸ್ತೆಗಳು ಮತ್ತು ಆಲಿವ್ ಮರಗಳಿಗೂ ಹಾನಿ ಮಾಡಿವೆ.
ರಾಜಧಾನಿ ಬೈರುತ್ ಸೇರಿದಂತೆ ಲೆಬನಾನ್ನ ಹಲವು ಭಾಗಗಳ ಮೇಲೆ ಇಸ್ರೇಲ್ ದಾಳಿಗಳನ್ನು ತೀವ್ರಗೊಳಿಸಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಹಿಜ್ಬುಲ್ಲಾ ಸಂಘಟನೆಯ ಹೋರಾಟಗಾರರು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಇದರ ಮಧ್ಯೆ, ಇಸ್ರೇಲ್ ಮತ್ತು ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ಕಿರುಕುಳ ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಧಾರ್ಮಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಕಳೆದ ತಿಂಗಳು ಜೆರುಸಲೆಮ್ ಹಳೆಯ ನಗರದ ಸಮೀಪ ಫ್ರೆಂಚ್ ನನ್ ಒಬ್ಬರ ಮೇಲೆ ನಡೆದ ಹಲ್ಲೆಯ ವಿಡಿಯೊ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಯ ಬಳಿಕ ಇಸ್ರೇಲಿ ಪೊಲೀಸರು 36 ವರ್ಷದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದರು.
ಮಾರ್ಚ್ನಲ್ಲಿ ಪಾಮ್ ಸಂಡೇ ಪ್ರಾರ್ಥನೆಗಾಗಿ ಪವಿತ್ರ ಸಮಾಧಿ ಚರ್ಚ್ಗೆ ತೆರಳುತ್ತಿದ್ದ ಮಾರ್ಚ್ನಲ್ಲಿ ಪಾಮ್ ಸಂಡೇ ಪ್ರಾರ್ಥನೆಗಾಗಿ ಪವಿತ್ರ ಸಮಾಧಿ ಚರ್ಚ್ಗೆ ತೆರಳುತ್ತಿದ್ದ ಕ್ರೈಸ್ತ ಧರ್ಮಗುರು ಪಿಯರ್ಬಟಿಸ್ಟಾ ಪಿಜ್ಜಬಲ್ಲಾ ಅವರನ್ನು ಇಸ್ರೇಲಿ ಪೊಲೀಸರು ತಡೆದ ಘಟನೆಗೂ ಟೀಕೆ ವ್ಯಕ್ತವಾಗಿತ್ತು. ಬಳಿಕ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಕ್ಷಮೆಯಾಚಿಸಿತ್ತು.






