ತಂದೆಯ ಸಾವಿಗೆ ಪ್ರತೀಕಾರ: ಇರಾನ್ ನ ಸರ್ವೋಚ್ಚ ನಾಯಕ ಶಪಥ

ಆಯತೊಲ್ಲಾ ಆಲಿ ಖಾಮಿನೈ , ಆಯತೊಲ್ಲಾ ಮುಜ್ತಬಾ ಖಾಮಿನೈ | Photo Credit : PTI
ಟೆಹರಾನ್, ಜು.11: ಕೊಲ್ಲಲ್ಪಟ್ಟ ತಮ್ಮ ಪೂರ್ವಾಧಿಕಾರಿ ಹಾಗೂ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ‘ದೇಶದ ಜನರ ಬೇಡಿಕೆಯಾಗಿದೆ ಮತ್ತು ಅದು ಖಂಡಿತವಾಗಿಯೂ ನೆರವೇರಬೇಕು’ ಎಂದು ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಮುಜ್ತಬಾ ಖಾಮಿನೈ ಶನಿವಾರ ತಿಳಿಸಿದ್ದಾರೆ.
ಅವರ ಟೆಲಿಗ್ರಾಮ್ ಖಾತೆಯಲ್ಲಿ ಬಿಡುಗಡೆ ಮಾಡಲಾದ ಲಿಖಿತ ಸಂದೇಶದಲ್ಲಿ ಈ ವಿಷಯ ತಿಳಿಸಲಾಗಿದೆ. ಫೆಬ್ರುವರಿ 28ರಂದು ಅಮೆರಿಕ–ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತರಾದ ತಮ್ಮ ತಂದೆ ಆಯತೊಲ್ಲಾ ಆಲಿ ಖಾಮಿನೈ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮುಜ್ತಬಾ ಈ ಸಂದೇಶ ನೀಡಿದ್ದಾರೆ.
‘ಹುತಾತ್ಮ ನಾಯಕ ಹಾಗೂ ಈ ಎರಡು ಯುದ್ಧಗಳಲ್ಲಿ ಹುತಾತ್ಮರಾದ ಎಲ್ಲರ ರಕ್ತದ ಸೇಡನ್ನು ತೀರಿಸಿಕೊಳ್ಳುವುದಾಗಿ ನಾವು ಶಪಥ ಮಾಡುತ್ತೇವೆ. ನಾವು ಅಲ್ಲಿ ಇರಲಿ ಅಥವಾ ಇಲ್ಲದಿರಲಿ, ಇದು ನೆರವೇರಲಿದೆ. ಶೀಘ್ರದಲ್ಲೇ ಪ್ರಪಂಚದಾದ್ಯಂತದ ಪ್ರತಿಯೊಬ್ಬ ಸ್ವತಂತ್ರ ವ್ಯಕ್ತಿಯೂ ಈ ದೈವಿಕ ಕಾರ್ಯಾಚರಣೆಯ ಒಂದು ಭಾಗವನ್ನು ಪೂರೈಸಲಿದ್ದಾರೆ’ ಎಂದು ಮುಜ್ತಬಾ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿರುವ ಮುಜ್ತಬಾ ಖಾಮಿನೈ ಅವರು, ಮಾರ್ಚ್ 8ರಂದು ಸರ್ವೋಚ್ಚ ನಾಯಕರಾಗಿ ನೇಮಕಗೊಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.






