ಒಂದೇ ದಿನದಲ್ಲಿ ಹಾರ್ಮುಝ್ ಜಲಸಂಧಿ ದಾಟಿದ ಮೂರು ಭಾರತೀಯ ಹಡಗುಗಳು

ಸಾಂದರ್ಭಿಕ ಚಿತ್ರ Photo Credit: AP
ಹೊಸದಿಲ್ಲಿ: ದೇಶವೈಭವ್, ದೇಶ ವಿಭೋರ್ ಹಾಗೂ ಸಮ್ಮರ್ ಹೆರಾಲ್ಡ್ ಹೆಸರಿನ ಮೂರು ತೈಲ ಸಾಗಾಣಿಕೆ ಟ್ಯಾಂಕರ್ ಹಡಗುಗಳು ಶನಿವಾರ ಒಂದೇ ದಿನ ಹಾರ್ಮುಝ್ ಜಲಸಂಧಿಯನ್ನು ದಾಟಿ ಭಾರತದತ್ತ ಪ್ರಯಾಣ ಬೆಳೆಸಿವೆ. ಈ ಹಡಗುಗಳು ಒಟ್ಟು 8.6 ಲಕ್ಷ ಟನ್ ಕಚ್ಚಾ ತೈಲವನ್ನು ಹೊಂದಿದ್ದು, ಸುರಕ್ಷಿತವಾಗಿ ಜಲಸಂಧಿ ದಾಟಿವೆ ಎಂದು ತಿಳಿದು ಬಂದಿದೆ. ಈ ಮೂಲಕ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ಆರಂಭವಾದ ಫೆಬ್ರವರಿ 28ರ ಬಳಿಕ ಮೊದಲ ಬಾರಿ ಒಂದೇ ದಿನ ಮೂರು ಹಡಗುಗಳು ಜಲಸಂಧಿ ದಾಟಿದಂತಾಗಿದೆ.
ಒಟ್ಟು 13 ಭಾರತೀಯ ಹಡಗುಗಳು ಹಾಗೂ 5 ವಿದೇಶಿ ಹಡಗುಗಳು ಸೇರಿ ಭಾರತಕ್ಕೆ ಆಗಮಿಸುತ್ತಿರುವ ಹದಿನೆಂಟು ಹಡಗುಗಳು ಜಲಸಂಧಿಯನ್ನು ದಾಟಿದ್ದು, ಈ ಹಡಗುಗಳಲ್ಲಿ 94 ಮಂದಿ ಭಾರತೀಯ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದಾರೆ.
ಭಾರತೀಯ ಕಡಲುಮಾರ್ಗಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು, ನಾವಿಕರ ಹಾಗೂ ಇಂಧನ ಜೀವನಾಡಿಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.
ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿದ್ದ ನಿರ್ಬಂಧವನ್ನು ಸಡಿಲಿಸಿದ ಬಳಿಕ ಹಾಗೂ ಉಭಯ ದೇಶಗಳ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ ಅಧಿಕೃತವಾಗಿ ಘೋಷಣೆಯಾದ ಬಳಿಕ ಹಾರ್ಮುಝ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.




