ವ್ಯಸನಿ ಅಪರಾಧಿ?

ಮನುಷ್ಯನ ವರ್ತನೆಯ ಹಿಂದೆ ಒಂದು ಮನಸ್ಸಿದೆ; ಮನಸ್ಸಿನ ಹಿಂದೆ ಒಂದು ಕಥೆಯಿರುತ್ತದೆ. ಕುಡಿತ, ಧೂಮಪಾನ, ಮಾದಕವಸ್ತುಗಳ ವ್ಯಸನಿ ಎಂದ ಮಾತ್ರಕ್ಕೆ ಅವರು ಅಪರಾಧಿಗಳಲ್ಲ. ಅವರ ಅಂತರಾಳಕ್ಕೆ ನೆರವು ಕೇಳುತ್ತಿರುವ ಮನುಷ್ಯರು. ಕುಟುಂಬ ಮತ್ತು ಸಮಾಜ ವ್ಯಸನಿಯನ್ನು ಶಿಕ್ಷಿಸಲು ನೋಡುವುದಕ್ಕಿಂತ ಅವರಲ್ಲಿರುವ ನೋವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.
ರಸ್ತೆಯ ಬದಿಯಲ್ಲಿ ಒಬ್ಬ ಕುಡುಕ ಬಿದ್ದಿದ್ದಾನೆ ಎಂದರೆ ಅವನನ್ನು ನೋಡಿದ ತಕ್ಷಣ ಕೆಲವರು ಮೂಗು ಮುರಿಯುತ್ತಾರೆ. ‘‘ಕುಡಿದು ಬಿದ್ದಿದ್ದಾನೆ, ತನ್ನ ಕುಟುಂಬವನ್ನು ಹಾಳು ಮಾಡಿಕೊಂಡ. ಕುಡಿತ ಬಿಡಕ್ಕೆ ಆಗಲ್ವಾ?’’ ಇಂತಹ ಮಾತುಗಳು ಹಗುರವಾಗಿ ಗಾಳಿಯಲ್ಲಿ ತೇಲುತ್ತವೆ. ಆದರೆ ಇದೇ ಜನರು, ಒಬ್ಬನ ಕಾಲು ಮುರಿದರೆ ಅವನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಒಬ್ಬನಿಗೆ ಜ್ವರ ಬಂದರೆ ಔಷಧಿ ಕೊಡುತ್ತಾರೆ. ಹೃದಯಾಘಾತವಾದರೆ ಆಂಬುಲೆನ್ಸ್ ಕರೆಯುತ್ತಾರೆ. ಆದರೆ ಮನಸ್ಸು ಗಾಯಗೊಂಡು, ಮೆದುಳು ವ್ಯಸನದ ಸಂಕೋಲೆಯಲ್ಲಿ ಸಿಕ್ಕಿಬಿದ್ದಾಗ ಮಾತ್ರ, ಸಾಮಾನ್ಯವಾಗಿ ಸಮಾಜ ವೈದ್ಯರಾಗುವುದಿಲ್ಲ; ನ್ಯಾಯಾಧೀಶರಾಗಿ ಬಿಡುತ್ತಾರೆ. ಇದು ಸಮಾಜದ ವಿರೋಧಾಭಾಸ.
ವ್ಯಸನವು ವ್ಯಕ್ತಿಯ ಒಂದು ತಪ್ಪಿನ ಆಯ್ಕೆಯಾಗಿ ಆರಂಭವಾಗಬಹುದು; ಆದರೆ ನಂತರ ಅದು ಆಯ್ಕೆಯಾಗಿರುವುದಿಲ್ಲ. ಮೊದಲ ಸಿಗರೇಟ್, ಮೊದಲ ಪೆಗ್, ಮೊದಲ ಮಾದಕ ವಸ್ತು, ಮೊದಲ ಕಾಮೋತ್ತೇಜಕ ವೀಡಿಯೊ; ಬಹುಶಃ ಕುತೂಹಲದಿಂದ ಆರಂಭವಾಗಿರಬಹುದು. ಆದರೆ ಕೆಲವು ತಿಂಗಳುಗಳು ಅಥವಾ ವರ್ಷಗಳ ನಂತರ, ಅದು ಕೇವಲ ಒಂದು ಅಭ್ಯಾಸವಾಗಿರುವುದಿಲ್ಲ. ಅದು ಮೆದುಳಿನ ರಾಸಾಯನಿಕ ವ್ಯವಸ್ಥೆಯನ್ನೇ ಬದಲಾಯಿಸುತ್ತದೆ. ನರಕೋಶಗಳು ಹೊಸ ಮಾರ್ಗಗಳನ್ನು ನಿರ್ಮಿಸುತ್ತವೆ. ಡೋಪಮಿನ್ನ ಅತಿಯಾದ ಉತ್ತೇಜನದಿಂದ, ಸಾಮಾನ್ಯ ಜೀವನದ ಸಂತೋಷಗಳು ಮಂಕಾಗುತ್ತವೆ. ಆಗ ಮದ್ಯ ಕೇವಲ ಮದ್ಯವಾಗಿರುವುದಿಲ್ಲ. ಮಾದಕ ವಸ್ತು ಕೇವಲ ಪುಡಿಯಾಗಿರುವುದಿಲ್ಲ. ಕಾಮೋತ್ತೇಜಕ ವೀಡಿಯೊ ಕೇವಲ ಚಿತ್ರವಾಗಿರುವುದಿಲ್ಲ. ಅವು ಮೆದುಳಿಗೆ ಇದಿಲ್ಲದೆ ಬದುಕಲಾಗುವುದಿಲ್ಲ ಎಂಬ ಸುಳ್ಳು ಸಂದೇಶವನ್ನು ಕೊಡಲು ಆರಂಭಿಸುತ್ತವೆ.
ಹಾಗೆ ನೋಡಲು ಹೋದರೆ ಪ್ರತಿಯೊಂದು ವ್ಯಸನದ ಹಿಂದೆ ಒಂದು ಅಪೂರ್ಣ ಅಗತ್ಯವಿರುತ್ತದೆ. ಮನುಷ್ಯನು ಯಾವಾಗಲೂ ಸುಖಕ್ಕಾಗಿ ವ್ಯಸನಿಯಾಗುವುದಿಲ್ಲ. ಹೆಚ್ಚಿನ ಬಾರಿ ಅವನು ದುಃಖದಿಂದ ತಪ್ಪಿಸಿಕೊಳ್ಳಲು ವ್ಯಸನಿಯಾಗುತ್ತಾನೆ. ಬಾಲ್ಯದಲ್ಲಿ ಪ್ರೀತಿಯನ್ನು ಕಳೆದುಕೊಂಡಿರಬಹುದು, ನಿರಂತರ ಅವಮಾನವನ್ನು ಅನುಭವಿಸಿರಬಹುದು, ಒಂಟಿತನದಲ್ಲಿರಬಹುದು, ಖಿನ್ನತೆ ಅಥವಾ ಆತಂಕದಿಂದ ನಿದ್ರೆ ಮಾಡಲಾಗದೆ ನರಳುತ್ತಿರಬಹುದು, ತಮ್ಮ ಬದುಕಿಗೆ ಅರ್ಥವೇ ಇಲ್ಲ ಎಂದು ಭಾವಿಸಿರಬಹುದು. ವ್ಯಸನ ಅವರಿಗೆ ಸಂತೋಷ ಕೊಡುವುದಿಲ್ಲ. ಸ್ವಲ್ಪ ಹೊತ್ತಿನ ಮಟ್ಟಿಗೆ ನೋವನ್ನು ಮರೆಸುತ್ತದೆ. ಹಾಗಾಗಿ ನಾವು ವ್ಯಸನವನ್ನು ಕಿತ್ತುಹಾಕಲು ಹೊರಟಾಗ, ಅದರ ಕೆಳಗೆ ಹುದುಗಿರುವ ನೋವನ್ನು ನೋಡಲೇಬೇಕು.
ಕುಟುಂಬಗಳು ಮತ್ತು ಬಹಳಷ್ಟು ಜನ ವ್ಯಸನಿಯನ್ನು ಬದಲಾಯಿಸಲು ಮೂರು ಆಯುಧಗಳನ್ನು ಬಳಸುತ್ತವೆ. ಉಪದೇಶ, ಅವಮಾನ ಮತ್ತು ಬೆದರಿಕೆ. ಈ ಮೂರೂ ಸ್ವಲ್ಪ ಸಮಯ ಸುಮ್ಮನಿರಿಸಬಹುದು. ಆದರೆ ಬದಲಾವಣೆಯನ್ನು ತರಲಾರವು. ಏಕೆಂದರೆ ವ್ಯಸನಿಯೊಳಗೆ ಈಗಾಗಲೇ ಒಬ್ಬ ಕ್ರೂರ ವಿಮರ್ಶಕ ಇರುತ್ತಾನೆ. ‘‘ನೀನು ನಿಷ್ಪ್ರಯೋಜಕ, ನಿನ್ನಿಂದ ಏನೂ ಆಗುವುದಿಲ್ಲ, ನೀನು ಎಲ್ಲರಿಗೂ ಹೊರೆ’’ ಎಂದು ಅವನೊಳಗಿನ ಧ್ವನಿಯೇ ಪ್ರತಿದಿನ ಹೇಳುತ್ತಿರುತ್ತದೆ. ಕುಟುಂಬವೂ ಅದನ್ನೇ ಪುನರಾವರ್ತಿಸಿದರೆ, ಅವನು ಮತ್ತೆ ವ್ಯಸನದಲ್ಲೇ ಆಶ್ರಯವನ್ನೇ ಹುಡುಕುತ್ತಾನೆ.
ಕುಟುಂಬಗಳು ಕೊಡಬೇಕಾಗಿರುವುದು ಉಪದೇಶವಲ್ಲ, ಅವಮಾನವಲ್ಲ, ಬದಲಾಗಿ ಸುರಕ್ಷಿತ ಸಂಬಂಧ ಮತ್ತು ಗೌರವ. ತೀರ್ಪು ನೀಡುವ ಬದಲು ಕಿವಿಗೊಡಬೇಕು. ನಿಯಂತ್ರಿಸಲು ಯತ್ನಿಸುವ ಬದಲು ಜೊತೆಯಾಗಿ ನಡೆಯುತ್ತೇವೆ ಎಂಬ ಭಾವನೆ ಗಟ್ಟಿಗೊಳಿಸಬೇಕು. ಇದು ಅನಗತ್ಯವಾದದ್ದು, ತಪ್ಪಿನದು ಎಂದು ಹೇಳುವ ಜೊತೆಗೆ ನಾವು ನಿನ್ನ ಜೊತೆಯಲ್ಲಿದ್ದೇವೆ ಎಂಬ ಸಂದೇಶ ವ್ಯಸನಕ್ಕೆ ನೀಡುವ ಚಿಕಿತ್ಸೆಯಲ್ಲಿನ ಅತ್ಯಂತ ಶಕ್ತಿಯುತ ಔಷಧಿ.
ಅನುಕಂಪ ತೋರುವುದು ಎಂದರೆ ತಪ್ಪನ್ನು ಸಮರ್ಥಿಸುವುದಲ್ಲ. ಅನುಕಂಪ ಮತ್ತು ಮಿತಿ (Boundaries) ಒಂದೇ ನಾಣ್ಯದ ಎರಡು ಮುಖಗಳು. ಹಿಂಸೆಯನ್ನು ಒಪ್ಪಿಕೊಳ್ಳಬಾರದು. ಕುಟುಂಬದ ಸುರಕ್ಷತೆಯನ್ನು ಕಡೆಗಣಿಸಬಾರದು. ಕಳ್ಳತನ, ದೌರ್ಜನ್ಯ ಅಥವಾ ದುರುಪಯೋಗವನ್ನು ಸಮರ್ಥಿಸಬಾರದು. ಆದರೆ ಮನುಷ್ಯನನ್ನು ತಿರಸ್ಕರಿಸದೆ, ಅವನ ವರ್ತನೆಗೆ ಸ್ಪಷ್ಟವಾದ ಮಿತಿಗಳನ್ನು ಹಾಕಬೇಕು. ಇದು ಪ್ರೀತಿಯ ಮತ್ತೊಂದು ರೂಪ.
ಸಮಾಜವೂ ತನ್ನ ಭಾಷೆಯನ್ನು ಬದಲಾಯಿಸಬೇಕು. ಕುಡುಕ, ಹಾಳಾದವ, ನಡತೆಗೆಟ್ಟವ ಎನ್ನುವ ಪದಗಳು ಮನುಷ್ಯನನ್ನು ಇನ್ನಷ್ಟು ಕೆಳಕ್ಕೆ ತಳ್ಳುತ್ತವೆ. ಭಾಷೆ ಬದಲಾದರೆ ದೃಷ್ಟಿಕೋನವೂ ಬದಲಾಗುತ್ತದೆ.
ನಾವು ವ್ಯಸನಿ ಎಂದು ತಿರಸ್ಕರಿಸುವ ಬದಲು ಸಹಾಯದ ಅಗತ್ಯವಿರುವ ಮನುಷ್ಯ ಎಂದು ನೋಡಲು ಕಲಿಯಬೇಕು.
ಪ್ರತೀ ವ್ಯಸನಿಯೂ ತನ್ನೊಳಗೆ ತನ್ನ ವ್ಯಸನದ ಮತ್ತು ಸಮಾಜದ ವಿರುದ್ಧ ಎರಡು ಯುದ್ಧಗಳನ್ನು ನಡೆಸುತ್ತಿದ್ದಾನೆ. ಮೊದಲ ಯುದ್ಧದಲ್ಲಿ ಅವನಿಗೆ ಚಿಕಿತ್ಸೆ ಬೇಕು. ಎರಡನೆಯ ಯುದ್ಧದಲ್ಲಿ ಅವನಿಗೆ ನಮ್ಮ ಅನುಕಂಪ ಬೇಕು. ಮಾನವ ನಾಗರಿಕತೆಯು ಪಾಪಿಗಳನ್ನು ಹುಡುಕುವ ಸಮಾಜದಿಂದ, ನೋವುಗಳನ್ನು ಅರ್ಥಮಾಡಿಕೊಳ್ಳುವ ಸಮಾಜದ ಕಡೆಗೆ ಸಾಗಬೇಕಿದೆ.
ಸಮಾಜವು ಸಾಮಾನ್ಯವಾಗಿ ವರ್ತನೆಯನ್ನು ನೋಡಿ ತೀರ್ಪು ಕೊಟ್ಟುಬಿಡುತ್ತದೆ. ಆದರೆ ಮನೋವಿಜ್ಞಾನ ವರ್ತನೆಯ ಹಿಂದೆ ಮನಸ್ಸು, ಅದರ ಹಿಂದೆ ವ್ಯಕ್ತಿಯ ಕುಟುಂಬದ ಕಥೆ, ಅನುಭವ, ಅಗತ್ಯ, ನರಮಂಡಲ, ಪರಿಸರ; ಇವೆಲ್ಲವನ್ನೂ ನೋಡುತ್ತಾ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಅಂದರೆ, ಯಾರಾದರೂ ಕೋಪಗೊಂಡರೆ ಮನೋವಿಜ್ಞಾನಿ ಕೋಪವನ್ನೇ ನೋಡುವುದಿಲ್ಲ; ಕೋಪವನ್ನು ಹುಟ್ಟಿಸಿದ ಅನುಭವವನ್ನು ನೋಡುತ್ತಾನೆ. ಯಾರಾದರೂ ಸುಳ್ಳು ಹೇಳಿದರೆ, ಸುಳ್ಳನ್ನೇ ನೋಡುವುದಿಲ್ಲ; ಸತ್ಯ ಹೇಳಲು ಹೆದರಿಸುವ ಪರಿಸರವನ್ನು ನೋಡುತ್ತಾನೆ. ಯಾರಾದರೂ ಮದ್ಯ ವ್ಯಸನಿಯಾದರೆ, ಮದ್ಯವನ್ನೇ ನೋಡುವುದಿಲ್ಲ; ಅದರ ಅಗತ್ಯವನ್ನು ಸೃಷ್ಟಿಸಿದ ಭಾವನಾತ್ಮಕ ಹಸಿವನ್ನು ನೋಡುತ್ತಾನೆ.
ಇದೇ ಮನೋವೈಜ್ಞಾನಿಕ ಜಾಗೃತಿ (Psychological Awareness)
ನೈತಿಕ ದೃಷ್ಟಿ ಕೇಳುವುದು ‘ನೀನು ಏನು ಮಾಡಿದೆ?’ ಎಂದು. ಆದರೆ ಮನೋವೈಜ್ಞಾನಿಕ ದೃಷ್ಟಿ ಕೇಳುವುದು ‘ನಿನಗೆ ಏನಾಯಿತು?’ ಎಂದು.






