ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಮಟ್ಟ ಪಾತಾಳಕ್ಕೆ..

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಹೈದರಾಬಾದ್ ರಾಜ್ಯದ ಭಾಗವಾಗಿದ್ದ ಕನ್ನಡ ಮಾತನಾಡುವ ಪ್ರದೇಶಗಳಾಗಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ಒಳಗೊಂಡ ಪ್ರದೇಶವನ್ನು ‘ಹೈದರಾಬಾದ್ ಕರ್ನಾಟಕ’ ಎಂದು ಗುರುತಿಸುತ್ತಿದ್ದರು. ಈ ಮೂರೂ ಜಿಲ್ಲೆಗಳು ಹೈದರಾಬಾದಿನ ನಿಜಾಮ್ ಸರಕಾರದ ವ್ಯಾಪ್ತಿಯಲ್ಲಿ ಇದ್ದವು. ಮರಾಠಿ ಭಾಷಿಕ ಪ್ರದೇಶ ವಿದರ್ಭ ಮತ್ತು ತೆಲುಗು ಭಾಷಿಕ ಪ್ರದೇಶವಾದ ತೆಲಂಗಾಣ ಕೂಡ ನಿಜಾಮ್ ಸರಕಾರದ ಆಡಳಿತ ವ್ಯಾಪ್ತಿಗೆ ಸೇರಿದ್ದವು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ನ್ಯಾಯಮೂರ್ತಿ ಫಝಲ್ ಅಲಿ ನೇತೃತ್ವದ ಏಕ ಸದಸ್ಯ ಆಯೋಗವನ್ನು ಭಾಷವಾರು ಪ್ರಾಂತ ರಚನೆಗಾಗಿ ಶಿಫಾರಸು ಮಾಡಲು ರಚಿಸಲಾಯಿತು. ಇದನ್ನು ರಾಜ್ಯ ಪುನರ್ ವಿಂಗಡಣಾ ಆಯೋಗ ಎಂದು ಕರೆಯುತ್ತಿದ್ದರು. ಭೌಗೋಳಿಕ ಕಾರಣಕ್ಕೆ ಅಸ್ತಿತ್ವದಲ್ಲಿದ್ದ ಸ್ವಾತಂತ್ರ್ಯ ಪೂರ್ವದ ಸಂಸ್ಥಾನಗಳನ್ನು ಭಾಷೆಯ ಆಧಾರದಲ್ಲಿ ಪುನರ್ ವಿಂಗಡಣೆ ಮಾಡುವುದು ಆಗಿನ ಕೇಂದ್ರ ಸರಕಾರದ ಆದ್ಯತೆಯಾಗಿತ್ತು. ಫಝಲ್ ಅಲಿ ನೇತೃತ್ವದ ರಾಜ್ಯ ಪುನರ್ ವಿಂಗಡಣಾ ಆಯೋಗ ಭಾಷಾವಾರು ಪ್ರಾಂತ ರಚನೆಗೆ ಅನುಕೂಲವಾಗುವ ಗಡಿಗೆರೆಗಳನ್ನು ನಿಗದಿಪಡಿಸುವ ಹೊಣೆ ಹೊತ್ತಿತ್ತು. ತನ್ನ ಮಿತಿಯಲ್ಲೇ ಅಧ್ಯಯನ ಕೈಗೊಂಡು ಭಾಷಾವಾರು ಪ್ರಾಂತ ರಚನೆಗಾಗಿ ಅಗತ್ಯದ ಶಿಫಾರಸುಗಳನ್ನು ಮಾಡಿತ್ತು. ಫಝಲ್ ಅಲಿ ಆಯೋಗವು ನಿಜಾಮ್ ರಾಜ್ಯದ ಭಾಗವಾಗಿದ್ದ ತೆಲುಗು ಭಾಷಿಕ ತೆಲಂಗಾಣ ಪ್ರದೇಶವನ್ನು ಆಂಧ್ರಪ್ರದೇಶಕ್ಕೆ, ಮರಾಠಿ ಭಾಷಿಕ ವಿದರ್ಭ ಪ್ರದೇಶವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಮತ್ತು ಕನ್ನಡ ಭಾಷಿಕ ಪ್ರದೇಶವಾದ ಹೈದರಾಬಾದ್ ಕರ್ನಾಟಕವನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಶಿಫಾರಸು ಮಾಡಿತ್ತು. ಕನ್ನಡ ಮಾತನಾಡುವ ಆದೋನಿ, ಜತ್ತ, ಸೋಲಾಪುರ, ಅಕ್ಕಲಕೋಟ ಭಾಗವನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಮೊದಲ ರಾಜ್ಯ ಪುನರ್ ವಿಂಗಡಣಾ ಆಯೋಗ ಶಿಫಾರಸು ಮಾಡದೆ ಗೊಂದಲ ಸೃಷ್ಟಿಸಿತು.
ಫಝಲ್ ಅಲಿ ಆಯೋಗ, ನಿಜಾಮ್ ರಾಜ್ಯದ ಜಿಲ್ಲೆಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸಿತ್ತು. ಅಷ್ಟು ಮಾತ್ರವಲ್ಲ, ಈ ಹಿಂದುಳಿದ ಪ್ರದೇಶದ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಶಿಫಾರಸು ಮಾಡಿತ್ತು. ಆ ಶಿಫಾರಸ್ನ ಅನ್ವಯ ಪ್ರಪ್ರಥಮವಾಗಿ ತೆಲಂಗಾಣ ಪ್ರದೇಶಕ್ಕಾಗಿ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ನಂತರ ಮರಾಠಿ ಭಾಷಿಕ ವಿದರ್ಭ ಪ್ರದೇಶದ ಜಿಲ್ಲೆಗಳಿಗೂ ವಿಶೇಷ ಸ್ಥಾನಮಾನ ನೀಡಿ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ಕಡೆಯದಾಗಿ ಹೈದರಾಬಾದ್ ನಿಜಾಮ್ ರಾಜ್ಯದ ಭಾಗವಾಗಿದ್ದ ಕನ್ನಡ ಭಾಷಿಕ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 371(ಜೆ)ನೇ ಕಲಂ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ಈ ವಿದ್ಯಮಾನ ನಡೆದು ದಶಕಗಳೇ ಕಳೆದಿವೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ತಾಂತ್ರಿಕ ಕಾರಣಕ್ಕೆ ಬಳ್ಳಾರಿ ಜಿಲ್ಲೆಯನ್ನು ಸೇರಿಸಲಾಗಿತ್ತು. ಈಗ ಈ ಪ್ರದೇಶದ ವ್ಯಾಪ್ತಿಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಸೇರಿ ಒಟ್ಟು ಏಳು ಜಿಲ್ಲೆಗಳು ಬರುತ್ತವೆ. ‘ಹೈದರಾಬಾದ್ ಕರ್ನಾಟಕ’ ಪದ ನಿಜಾಮ್ ರಾಜ್ಯದ ದಾಸ್ಯದ ಸಂಕೇತ ಎಂದು ಭಾವಿಸಿ ಆ ಏಳು ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನು ‘ಕಲ್ಯಾಣ ಕರ್ನಾಟಕ’ ಎಂದು ಹಿಂದಿನ ಬಿಜೆಪಿ ಸರಕಾರ ಮರು ನಾಮಕರಣ ಮಾಡಿತು. ಬಹು ದೊಡ್ಡ ವ್ಯಂಗ್ಯವೆಂದರೆ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳು ಈ ಹೊತ್ತಿಗೂ ಅಭಿವೃದ್ಧಿ ಹೊಂದದೆ ಹಿಂದುಳಿದಿವೆ.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಿದ ಮೇಲೂ ಮುಂದುವರಿದಿದೆ.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪ್ರಾದೇಶಿಕ ಅಸಮಾನತೆಯ ಸ್ಥಿತಿಗತಿ ಅರಿಯಲು ಮತ್ತು ಅಸಮಾನತೆ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮಗಳಿಗಾಗಿ ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಲು ಸಮಿತಿಯೊಂದನ್ನು ರಚಿಸಿತ್ತು. ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿಗೆ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅಧ್ಯಕ್ಷರಾಗಿದ್ದರು. ವ್ಯಾಪಕ ಸಮೀಕ್ಷೆ ನಡೆಸಿ ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದ ಸಮಿತಿ ಸಮಗ್ರ ವರದಿ ನೀಡಿತು. ಪ್ರತೀ ವರ್ಷಕ್ಕೆ ಎರಡು ಸಾವಿರ ಕೋಟಿ ರೂ.ಯಂತೆ ಎಂಟು ವರ್ಷಗಳ ನಿಗದಿತ ಕಾಲಾವಧಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಶಿಫಾರಸು ಮಾಡಿತ್ತು. ನಂಜುಂಡಪ್ಪ ವರದಿಯನ್ನು ಹಿಂದಿನ ಸರಕಾರಗಳು ತಾತ್ವಿಕವಾಗಿ ಒಪ್ಪಿಕೊಂಡಿದ್ದವು. ಮಾತ್ರವಲ್ಲ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಷ್ಠಾನ ಸಮಿತಿಯೊಂದನ್ನು ರಚಿಸಿದ್ದರು.
ನಂಜುಂಡಪ್ಪ ವರದಿ ವಿಶೇಷವಾಗಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಹಿಂದುಳಿದಿರುವಿಕೆಗೆ ಕಾರಣವಾದ ಅಂಶಗಳನ್ನು ಅತ್ಯಂತ ವೈಜ್ಞಾನಿಕ ನೆಲೆಯಲ್ಲಿ ಪತ್ತೆ ಹಚ್ಚಿತ್ತು. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಸೇರಿ ಕರ್ನಾಟಕದ ಇತರ ಹಿಂದುಳಿದ ಪ್ರದೇಶಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ಅನಾವರಣಗೊಳಿಸಿತ್ತು. ನಂಜುಂಡಪ್ಪ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದ್ದರೂ ಈಗಿನ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸಾಕಷ್ಟು ಅಭಿವೃದ್ಧಿ ಹೊಂದಿರುತ್ತಿದ್ದವು.
ಮಾಜಿ ಮಂತ್ರಿ ದಿ. ವೈಜನಾಥ್ ಪಾಟೀಲರ ನಿರಂತರ ಹೋರಾಟ, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್. ಧರಂಸಿಂಗ್ ಅವರ ಪ್ರಯತ್ನದ ಫಲವಾಗಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ 371(ಜೆ)ನೇ ಕಲಂ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನವೇನೋ ದೊರಕಿತು. ಆದರೆ ಅದರ ಪರಿಣಾಮಕಾರಿ ಅನುಷ್ಠಾನ ಮಾತ್ರ ಈ ಹೊತ್ತಿಗೂ ಕನಸಾಗಿಯೇ ಉಳಿದಿದೆ. ವಿಶೇಷ ಸ್ಥಾನಮಾನ ದೊರಕಿದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಹೆಚ್ಚುವರಿ ಮೀಸಲಾತಿ ದೊರೆಯುತ್ತದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಹೋದರೆ ವಿಶೇಷ ಸ್ಥಾನಮಾನದ ಮೂಲ ಆಶಯವೇ ವಿಫಲವಾಗುತ್ತದೆ. ಈ ವಿಶೇಷ ಸ್ಥಾನಮಾನದಿಂದಾಗಿ ಇಂಜಿನಿಯರಿಂಗ್, ಮೆಡಿಕಲ್ ಮತ್ತು ಇನ್ನಿತರ ವೃತ್ತಿಪರ ಕೋರ್ಸ್ಗಳ ಪ್ರವೇಶ ಪಡೆಯಲು ಅನುಕೂಲವಾಗಿದೆ.
ನಂಜುಂಡಪ್ಪ ವರದಿ ಮತ್ತು ವಿಶೇಷ ಸ್ಥಾನಮಾನ ದೊರೆತ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ಹಣ ಹರಿದು ಬರುತ್ತಿದೆ. ಅನುದಾನ ದೊರೆತ ಮಾತ್ರಕ್ಕೆ ಅಭಿವೃದ್ಧಿ ಆಗುವುದಿಲ್ಲ ಎಂಬುದು ಕಳೆದ ಹತ್ತು ವರ್ಷಗಳ ಆ ಭಾಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಗಮನಿಸಿದರೆ ಮನವರಿಕೆಯಾಗುತ್ತದೆ.
ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಮುಖ್ಯಮಂತ್ರಿಯಾದಾಗಲೇ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಂವಿಧಾನ ಬದ್ಧ ಸ್ಥಾನಮಾನ ದೊರೆಯಿತು. ಹಿರಿಯ ಮಂತ್ರಿ ಎಚ್.ಕೆ. ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿ 371(ಜೆ)ನೇ ಕಲಂ ತಿದ್ದುಪಡಿಯ ಮೂಲಕ ದಕ್ಕಿದ ವಿಶೇಷ ಸ್ಥಾನಮಾನದ ಸವಲತ್ತುಗಳನ್ನು ದೊರಕಿಸಿಕೊಡಲು ನೀತಿ ನಿಯಮ ರೂಪಿಸಿದರು. ಅನುಷ್ಠಾನಕ್ಕೆ ಕಟ್ಟು ನಿಟ್ಟಿನ ಕ್ರಮ ವಹಿಸದೆ ಇರುವುದರಿಂದ ಫಲಗಳು ದೊರೆಯುವುದು ವಿಳಂಬವಾಗುತ್ತಲೇ ಇದೆ.
ಕರ್ನಾಟಕ ಸರಕಾರ, ಅದರಲ್ಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತೀ ವರ್ಷ ಐದು ಸಾವಿರ ಕೋಟಿ ರೂ. ಅನುದಾನ ಒದಗಿಸುತ್ತಿದೆ. ಆದರೂ ಎದ್ದು ಕಾಣುವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.
ವಿಶೇಷ ಸ್ಥಾನಮಾನ ದೊರಕಿದ ಮೇಲೆ, ಖಮರುಲ್ ಇಸ್ಲಾಮ್ ಅವರು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿದ್ದರು. ಹುಮ್ಮಸ್ಸಿನಿಂದ ಅಭಿವೃದ್ಧಿ ಪಡಿಸಲು ಮುಂದಾಗಲಿಲ್ಲ. ನಂತರ ಬಂದ ಡಾ. ಶರಣಪ್ರಕಾಶ್ ಪಾಟೀಲ್ ಕನಸುಗಳಿಲ್ಲದ ದಾರಿಯಲ್ಲಿ ನಡೆದರು. ಬಿಜೆಪಿ ಸರಕಾರದ ಅವಧಿಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅಲ್ಲಿಯವರೆಗೆ ಹಿರಿಯ ಮಂತ್ರಿಯನ್ನು ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿಸುವ ನಿಯಮ ಇತ್ತು. ಬಿಜೆಪಿ ಸರಕಾರ ನಿಯಮ ಗಾಳಿಗೆ ತೂರಿ ಶಾಸಕನಿಗೆ ಗಂಜಿ ಕೇಂದ್ರವಾಗಿ ಅಭಿವೃದ್ಧಿ ಮಂಡಳಿಯ ಜವಾಬ್ದಾರಿ ನೀಡಿತು. ಅವರು ಆ ಹುದ್ದೆಯಲ್ಲಿ ಇರುವಷ್ಟು ದಿನ ಹಣ ದೋಚುವುದು ಬಿಟ್ಟು ಬೇರೇನನ್ನೂ ಮಾಡಲಿಲ್ಲ.
ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಸಿದ್ದರಾಮಯ್ಯ ಅವರು ಮಂತ್ರಿಗಿರಿ ವಂಚಿತ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷಗಿರಿ ದಯಪಾಲಿಸಿದರು. ಚುನಾವಣೆ ಗೆಲ್ಲುವ ತಂತ್ರ ಕರಗತ ಮಾಡಿಕೊಂಡಿರುವ ಡಾ. ಅಜಯಸಿಂಗ್ ಅಭಿವೃದ್ಧಿ ಬಗ್ಗೆ ಯಾವತ್ತೂ ಗಂಭೀರ ಕಾಳಜಿ ತೋರಿದವರಲ್ಲ. ಅವರು ಪ್ರತಿನಿಧಿಸುವ ಜೇವರ್ಗಿ ವಿಧಾನಸಭಾ ಕ್ಷೇತ್ರದ ಸ್ಥಿತಿಗತಿ ಡಾ. ಅಜಯಸಿಂಗ್ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಡಾ. ಅಜಯಸಿಂಗ್ ಅವರಿಗೆ ಹೋಲಿಸಿದರೆ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಅಭಿವೃದ್ಧಿಯ ಕನಸುಗಳಿವೆ. ಆದರೆ ನಿರೀಕ್ಷಿತ ಫಲ ಕೊಡುತ್ತಿಲ್ಲ.
ಡಾ. ಅಜಯ್ಸಿಂಗ್ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮೇಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಮೊದಲ ಆದ್ಯತೆ ಮಾಡಿಕೊಂಡು ಯೋಜನೆ ರೂಪಿಸಿದರು. ಆರೋಗ್ಯ ಕ್ಷೇತ್ರದ ಸುಧಾರಣೆಯ ಭಾಗವಾಗಿ ದುಬಾರಿ ವೆಚ್ಚದ ದೊಡ್ಡ ಆಸ್ಪತ್ರೆಯ ಕಟ್ಟಡಗಳು ತಲೆ ಎತ್ತಿದವು ಹೊರತು ಜನಸಾಮಾನ್ಯರಿಗೆ ಆರೋಗ್ಯ ಭಾಗ್ಯ ಸಿಗಲೇ ಇಲ್ಲ.
ಶೈಕ್ಷಣಿಕ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಒಟ್ಟು ಅನುದಾನದ ಪ್ರತಿಶತ ಇಪ್ಪತ್ತೈದರಷ್ಟು ಹಣ ಮಿಸಲಿಟ್ಟು ಯೋಜನೆ ರೂಪಿಸಿದರು. ಶೈಕ್ಷಣಿಕ ಸ್ಥಿತಿಗತಿ ಸುಧಾರಿಸುವುದು ಬಿಟ್ಟು ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಗುರುರಾಜ ಕರ್ಜಗಿಯಂಥ ಸಲಹೆಗಾರರ ಸಲಹೆಯ ಮಿತಿ ಅಷ್ಟೇ ಎಂಬುದು ಈಗಲಾದರೂ ಡಾ. ಅಜಯ್ಸಿಂಗ್ ಅರಿಯಬೇಕು.
ಕಲ್ಯಾಣ ಕರ್ನಾಟಕದ ಸಾಕ್ಷರತಾ ಪ್ರಮಾಣ ಪ್ರತಿಶತ 63.7ರಷ್ಟಿದೆ. ಕರ್ನಾಟಕ ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣ ಪ್ರತಿಶತ 75.36ರಷ್ಟಿದೆ. ವ್ಯತ್ಯಾಸ ಪ್ರತಿಶತ ಹತ್ತಕ್ಕೂ ಹೆಚ್ಚಿದೆ. ಕಲ್ಯಾಣ ಕರ್ನಾಟಕದ 115 ಸರಕಾರಿ ಶಾಲೆಗಳು ಸೊನ್ನೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡಿವೆ. 241 ಸರಕಾರಿ ಶಾಲೆಗಳು ಒಂದರಿಂದ ಹತ್ತು ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡಿವೆ. ದುರಂತದ ಸಂಗತಿಯೆಂದರೆ, ಪ್ರತಿಶತ 65ರಷ್ಟು ಸರಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ.
ಈ ವರ್ಷದ ಪಿಯುಸಿ ಮತ್ತು ಎಸೆಸೆಲ್ಸಿ ಫಲಿತಾಂಶದ ಅಂಕಿ ಸಂಖ್ಯೆಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವೈಫಲ್ಯ ಎದ್ದು ಕಾಣುತ್ತದೆ. ಈ ವರ್ಷದ ಕರ್ನಾಟಕ ರಾಜ್ಯದ ಪಿಯುಸಿ ಫಲಿತಾಂಶ, ಸರಾಸರಿ ಪ್ರತಿಶತ 73.45ರಷ್ಟಿದೆ. ಹುಡುಗಿಯರು ಪ್ರತಿಶತ 77.8ರಷ್ಟು ಸಾಧನೆ ಮೆರೆದಿದ್ದಾರೆ. ಹುಡುಗರು ಪ್ರತಿಶತ 68.2ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಯಥಾ ಪ್ರಕಾರ ಉಡುಪಿ (ಶೇ. 93.90), ದಕ್ಷಿಣ ಕನ್ನಡ (ಶೇ.93.57) ಜಿಲ್ಲೆಗಳು ಮೊದಲ ಸ್ಥಾನಕ್ಕೆ ಪೈಪೋಟಿ ನಡೆಸಿವೆ. ರಾಜ್ಯದಲ್ಲಿ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳಿವೆ. ಪಿಯುಸಿಯಲ್ಲಿ ಈ ವರ್ಷ ಯಾದಗಿರಿ (ಶೇ. 48.45), ಕಲಬುರಗಿ (ಶೇ.55.75), ರಾಯಚೂರು (ಶೇ. 58.35) ಫಲಿತಾಂಶ ದಾಖಲಿಸಿ ಕ್ರಮವಾಗಿ 30, 31 ಮತ್ತು 32ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. ಇದ್ದುದರಲ್ಲಿ ಬೀದರ್ (ಶೇ. 67.31), ಕೊಪ್ಪಳ (ಶೇ. 67.2), ಬಳ್ಳಾರಿ (ಶೇ. 64.41) ಉತ್ತಮ ಫಲಿತಾಂಶ ತಂದು ಕೊಟ್ಟಿವೆ. ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆ ಮಾತ್ರ ರಾಜ್ಯದ ಸರಾಸರಿ ಫಲಿತಾಂಶದೊಂದಿಗೆ ಸ್ಪರ್ಧೆ ನಡೆಸಿ ಗೆದ್ದಿದೆ.
ಇತ್ತೀಚೆಗಷ್ಟೇ ಪ್ರಕಟವಾದ ಎಸೆಸೆಲ್ಸಿ ಫಲಿತಾಂಶ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ದಿವಾಳಿತನಕ್ಕೆ ಸಾಕ್ಷಿಯಾಗಿ ನಿಂತಿದೆ. ದಕ್ಷಿಣ ಕನ್ನಡ (ಶೇ.91), ಉಡುಪಿ (ಶೇ.89), ಬೆಂಗಳೂರು ಗ್ರಾಮಾಂತರ(ಶೇ. 74)ಮತ್ತು ಬೆಂಗಳೂರು ನಗರ (ಶೇ. 72) ಜಿಲ್ಲೆಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಮೊದಲ ಸಾಲಿನಲ್ಲಿ ಸ್ಥಾನ ಪಡೆದಿವೆ. ಆದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸರಾಸರಿ ಶೇ. 50ಕ್ಕೆ ನಿಂತಿವೆ. ಅಕ್ಷರ ಆವಿಷ್ಕಾರ, ಮರು ಸಿಂಚನದಂಥ ಕಾರ್ಯಕ್ರಮಗಳಿಗೆ ಹಣ ವ್ಯಯ ಮಾಡಿಯೂ ಕಲಬುರಗಿ ಜಿಲ್ಲೆ ಪ್ರತಿಶತ 42.4ರಷ್ಟು ಫಲಿತಾಂಶ ದಾಖಲಿಸಿ ಕೊನೆಯ 35ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಹೊಸಪೇಟೆ ಕೇಂದ್ರ ಸ್ಥಾನದ ವಿಜಯನಗರ ಜಿಲ್ಲೆ ಪ್ರತಿಶತ 67.6ರಷ್ಟು ಫಲಿತಾಂಶ ದಾಖಲಿಸಿ 19ನೇ ಸ್ಥಾನಕ್ಕೇರಿದೆ. ಯಾದಗಿರಿ (ಶೇ. 51.6) 33ನೇ ಸ್ಥಾನ, ಬೀದರ್ (ಶೇ. 53.2) 31ನೇ ಸ್ಥಾನ, ರಾಯಚೂರು (ಶೇ. 52), ಕೊಪ್ಪಳ(ಶೇ. 57.3), ಬಳ್ಳಾರಿ (ಶೇ. 60.2) ಕಡಿಮೆ ಫಲಿತಾಂಶ ದಾಖಲಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವೈಫಲ್ಯ ಎತ್ತಿ ತೋರಿಸಿವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಒಟ್ಟು ಅನುದಾನದ ಪ್ರತಿಶತ 25ರಷ್ಟು ಹಣವನ್ನು ಶೈಕ್ಷಣಿಕ ಪ್ರಗತಿ ಸಾಧಿಸಲು ಮೀಸಲಿಟ್ಟಿದ್ದರು. ಈ ಬಗೆಯ ಕಳಪೆ ಸಾಧನೆ ಹಲವು ದಶಕಗಳಿಂದ ಮುಂದುವರಿದಿದೆ.
ಕನಿಷ್ಠ ಪಕ್ಷ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದು ಹೆಚ್ಚಿನ ಅನುದಾನ ದೊರೆತ ಮೇಲಾದರೂ ಶೈಕ್ಷಣಿಕ ಸ್ಥಿತಿಗತಿಯಲ್ಲಿ ಸುಧಾರಣೆ ಕಾಣಿಸಬೇಕಿತ್ತು. ಕಲ್ಯಾಣ ಕರ್ನಾಟಕ ಪ್ರದೇಶದ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ಮಂತ್ರಿಗಳಲ್ಲಿ ಕನಿಷ್ಠ ಪಕ್ಷ ಅಳುಕು ಮೂಡಿಸಬೇಕಿತ್ತು. ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ್, ಡಾ. ಶರಣಪ್ರಕಾಶ್ ಪಾಟೀಲ್, ಶಿವರಾಜ್ ತಂಗಡಗಿ ಮುಂತಾದವರು ಇದು ನಮ್ಮ ವೈಫಲ್ಯ ಎಂದು ಈ ಹೊತ್ತಿಗೂ ಫೀಲ್ ಮಾಡುತ್ತಲೇ ಇಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರಲ್ಲಿ ಪಶ್ಚಾತ್ತಾಪದ ಭಾವವೇ ಇಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಜನತೆಯ ಅಭಿವೃದ್ಧಿಗಾಗಿ ಬಳಸುವ ಇರಾದೆ ಇದ್ದವರು ಯೋಜನೆ ರೂಪಿಸುವಾಗ ವೈಜ್ಞಾನಿಕವಾಗಿ ಆಲೋಚಿಸುತ್ತಾರೆ. ತಮ್ಮ ಉದ್ಧಾರಕ್ಕೆ ಯೋಜನೆ ರೂಪಿಸುವವರಿಗೆ ಯಾವ ವೈಫಲ್ಯವೂ ಅಪರಾಧಿ ಭಾವ ಮೂಡಿಸುವುದಿಲ್ಲ.
ಸಾವಿರಾರು ಕೋಟಿ ಹಣ ಖರ್ಚು ಮಾಡಿಯೂ ಶೈಕ್ಷಣಿಕ ಗುಣ ಮಟ್ಟ ಹೆಚ್ಚಿಸಲು ಸಾಧ್ಯವಾಗಿಲ್ಲವೆಂದರೆ ಸಮಸ್ಯೆಯ ಮೂಲ ಅರಿತಿಲ್ಲ ಎಂಬುದು ಮನದಟ್ಟಾಗುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ವಲಸೆ ಪ್ರಮಾಣ ಹೆಚ್ಚಾಗಿದೆ. ಬಡವರು ಹೊಟ್ಟೆಪಾಡಿಗಾಗಿ ಗೋವಾ, ಮುಂಬೈ, ಬೆಂಗಳೂರಿಗೆ ದುಡಿಯಲು ಹೋಗುತ್ತಾರೆ. ವಲಸೆ ತಡೆಯಲು ಸಾಧ್ಯವಾಗದಿದ್ದರೆ ಶೈಕ್ಷಣಿಕ ಅಭಿವೃದ್ಧಿ ಅಸಾಧ್ಯ. ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳ ಮನೆಗಳು ಅರಮನೆಯಂತಿವೆ. ಆದರೆ ಶಾಲೆಗಳು ಕುರಿದೊಡ್ಡಿಗಿಂತಲೂ ಕನಿಷ್ಠವಾಗಿರುತ್ತವೆ. ಅತ್ಯುತ್ತಮ ಶಾಲಾ ಕಟ್ಟಡ, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಕಳಪೆ ಫಲಿತಾಂಶಕ್ಕೆ ಕಾರಣ. ಕಲ್ಯಾಣ ಕರ್ನಾಟಕ ಪ್ರದೇಶದ ಶಾಲೆಗಳಲ್ಲಿ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ. ಸರಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಪಾಠ ಪ್ರವಚನಕ್ಕೆ ಪೂರಕವಾದ ವಾತಾವರಣ ಅಲ್ಲಿರುವುದಿಲ್ಲ. ಶಾಲಾ ಶಿಕ್ಷಕರಿಗೆ ಹಳ್ಳಿಗಳಲ್ಲಿ ವಸತಿ ಸೌಲಭ್ಯ ಇಲ್ಲದಿರುವುದರಿಂದ ಅವರೆಲ್ಲ ನಗರಗಳಲ್ಲಿ ಮನೆ ಮಾಡಿ ಪ್ರತಿ ದಿನ ಓಡಾಡುವುದರಲ್ಲಿ ಸಮಯ ವ್ಯಯ ಮಾಡುತ್ತಿರುತ್ತಾರೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಡಿಡಿಪಿಐ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಗ್ರಾಮೀಣ ಪ್ರದೇಶದ ಅದರಲ್ಲೂ ಕಲ್ಯಾಣ ಕರ್ನಾಟಕದ ಮಕ್ಕಳು ದಡ್ಡರೇನಲ್ಲ. ಅತ್ಯುತ್ತಮ ಕಲಿಕೆ ಸಿಗದೆ ಇರುವುದರಿಂದ ಉತ್ತಮ ಫಲಿತಾಂಶ ತೆಗೆಯಲು ಸಾಧ್ಯವಾಗುತ್ತಿಲ್ಲ. ಶ್ರೀಮಂತರ ಮಕ್ಕಳು ಓದುವ ದುಬಾರಿ ವೆಚ್ಚದ ಶಾಲೆಗಳಲ್ಲಿ ಅತ್ಯುತ್ತಮ ಫಲಿತಾಂಶ ಬರುತ್ತಲೇ ಇದೆ. ಸುಧಾರಣೆಯಾಗಬೇಕಿರುವುದು ಸರಕಾರಿ ಶಾಲಾ ವ್ಯವಸ್ಥೆ. ಆ ಭಾಗದ ಜನಪ್ರತಿನಿಧಿಗಳು ಎಂದಿನವರೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕೇವಲ ಹಣ ಮಾಡುವ ಸಾಧನವನ್ನಾಗಿ ಬಳಸುವ ಮನೋಧರ್ಮ ಹೊಂದಿರುತ್ತಾರೋ ಅಲ್ಲಿಯವರೆಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಣ ಅಧಿಕಾರಿ, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಒಂದು ನಿಧಿ ಆಗಿರುತ್ತದೆಯಷ್ಟೇ.