Kalburagi | ರಸ್ತೆ ಅಪಘಾತ: ಒಂದೇ ಬೈಕಿನಲ್ಲಿ ಸಂಚರಿಸುತ್ತಿದ್ದ ಮೂವರು ಮೃತ್ಯು

ಕಲಬುರಗಿ: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಗರದ ಹೊರವಲಯದ ಪಾಣೇಗಾಂವ ಸಮೀಪ ರವಿವಾರ ತಡರಾತ್ರಿ ನಡೆದಿದೆ.
ಮೃತರನ್ನು ಪಾಣೇಗಾಂವ ಸಮೀಪದ ಶಿವಾಜಿ ತಾಂಡಾ ನಿವಾಸಿಗಳಾದ ಧರ್ಮರಾಜ ಚವ್ಹಾಣ (30), ಅನಿಲ ಗೋಪಾಲ ಪವಾರ್ (26) ಹಾಗೂ ಸುಂದರ ಹರಿಶ್ಚಂದ್ರ ರಾಠೋಡ್ (28) ಎಂದು ಗುರುತಿಸಲಾಗಿದೆ.
ಇವರು ಮೂವರು ಬೈಕಿನಲ್ಲಿ ರವಿವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪಾಣೇಗಾಂವ ಗ್ರಾಮಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿ ಶಾಲೂ, ಸಂಚಾರಿ 1 ಎಸಿಪಿ ಡಿಟಿ ಪ್ರಭು, ಪಿಐ ಶಕೀಲ್ ಅಂಗಡಿ ಸೇರಿದಂತೆ ಮತ್ತಿತ್ತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಸಂಚಾರಿ ಪೊಲೀಸ್ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.






