ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ಡೆಂಗಿ, ಚಿಕುನ್ ಗುನ್ಯಾ, ಆನೆಕಾಲು ರೋಗ, ಮಲೇರಿಯಾ ಹಾಗೂ ಮೆದುಳು ಜ್ವರದಂತಹ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮದ ಭಾಗವಾಗಿ ಜನರಲ್ಲಿ ಜಾಗೃತಿ ಮಾಡುವುದು ಅತ್ಯವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಹೇಳಿದ್ದಾರೆ.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸೊಳ್ಳೆಗಳ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ವಲಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರತೀ ವರ್ಷ ಹಲವಾರು ರೋಗಗಳ ಕುರಿತು ಜನಜಾಗೃತಿ ಮೂಡಿಸಲು ದಿನಾಚರಣೆಗಳನ್ನು ಆಚರಿಸಿ ಬರುವಂತಹ ಪರಿಪಾಠಗಳನ್ನು ಬೆಳೆಸಿಕೊಂಡು ಬಂದಿದೆ. ಇಲಾಖೆಯ ಸಿಬ್ಬಂದಿಯವರು ಸಾರ್ವಜನಿಕರ ಸಹಯೋಗದೊಂದಿಗೆ ಜನ ಸಮುದಾಯದಲ್ಲಿ ಮಲೇರಿಯಾದಂತಹ ಮಾರಕ ರೋಗವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮ ಹಾಕಿದ್ದಾರೆ ಎಂದು ಶ್ಲಾಘಿಸಿದರು.
ಮಳೆಗಾಲದ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಸರಣ ಹೊಂದುತ್ತಿರುವ ಡೆಂಗಿ ರೋಗವನ್ನು ಕೂಡಾ ನಿಯಂತ್ರಣ ತರುವಲ್ಲಿ ಸಾರ್ವಜನಿಕರ ಸಹಯೋಗ ಕೂಡಾ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಅಧಿಕಾರಿ ಡಾ.ಸಿದ್ದು ಪಾಟೀಲ ಮಾತನಾಡಿ, ಬ್ರಿಟಿಷ್ ಭಾರತದಲ್ಲಿ ವೈದ್ಯಾಧಿಕಾರಿಯಾಗಿದ್ದ ಸರ್. ರೋನಾಲ್ಡ್ ರಾಸ್ ಸೊಳ್ಳೆಗಳಿಂದ ಅದೂ ವಿಶೇಷವಾಗಿ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗವೂ ಹರಡುತ್ತದೆ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಈ ದೇಶದ ಸಿಕಂದ್ರಾಬಾದ್ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಹಲವಾರು ಸೊಳ್ಳೆಗಳನ್ನು ಅಧ್ಯಯನ ಮಾಡಿ ಅಗಸ್ಟ್ 20, 1897ರಂದು ಪತ್ತೆಹಚ್ಚಿರುವ ಈ ಸಂಶೋಧನೆ ಶ್ಲಾಘನೀಯ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಕಾರ್ಯಕ್ರಮ ಅಧಿಕಾರಿ ಡಾ.ಶಿವಶರಣಪ್ಪ ಭೂಸನೂರ ಮಾತನಾಡಿ, ಸೊಳ್ಳೆಗಳು ಮಳೆಗಾಲದಲ್ಲಿ ಅಷ್ಟೇ ಅಲ್ಲ ವರ್ಷದುದ್ದಕ್ಕೂ ತಮ್ಮ ಸಂತಾನೋತ್ಪತ್ತಿ ಮಾಡುತ್ತಿದ್ದು, ಹೀಗಾಗಿ ಇತ್ತೀಚಿನ ದಿನಗಳಲ್ಲಿ ವರ್ಷದುದ್ದಕ್ಕೂ ಡೆಂಗಿ ಹಾಗೂ ಚಿಕುನ್ ಗುನ್ಯಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂದಿ ಸಾರ್ವಜನಿಕರ ಸಹಕಾರವನ್ನು ತೆಗೆದುಕೊಂಡು ಜನಜಾಗೃತಿಯನ್ನು ಮೂಡಿಸುವುದು ಜೊತೆಗೆ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದರು.
ಜಿಲ್ಲಾ ಕಾಲರಾ ನಿಯಂತ್ರಣ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ ಮಾತನಾಡಿ, ಶಾಲಾ ಮಟ್ಟದಲ್ಲಿ ಈಗಾಗಲೇ ಇಲಾಖೆಯ ಸಿಬ್ಬಂದಿ ಹೋಗಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ, ಮುಂದಿನ ದಿನಗಳ ಸುಮುದಾಯದತ್ತ ತೆರಳಿ ಸ್ವಸಹಾಯ ಗುಂಪಿನ ಸಹಾಯ ಹಾಗೂ ಸಂಘಸಂಸ್ಥೆಗಳ ಸಹಕಾರ ಪಡೆದು ಸಾಮಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಕುರಿತು ವಿವರಣೆ ನೀಡಿದರೆ ಸಾಂಕ್ರಾಮಿಕ ರೋಗ ರಹಿತ ಸಮಾಜವನ್ನಾಗಿ ನಿರ್ಮಾಣ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಅಧಿಕಾರಿ ಡಾ.ಶಿವಶರಣಪ್ಪ ಮೂಳೆಗಾಂವ್ ಮಾತನಾಡಿದರು.
ಜಿಲ್ಲಾ ಕೀಟಶಾಸ್ತಜ್ಞ ಚಾಮರಾಜ ದೊಡಮನಿ ಕಾರ್ಯಕ್ರಮ ನಿರೂಪಿಸಿದರು. ಸಮಾಲೋಚಕ ಕಾರ್ಣಿಕ ಕೋರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.







