ಕಲಬುರಗಿ | ಕಳ್ಳತನ ಪ್ರಕರಣದ ಇಬ್ಬರ ಆರೋಪಿಗಳ ಸೆರೆ: 16.50 ಲಕ್ಷ ರೂ. ಮೌಲ್ಯದ ಸೊತ್ತು ವಶ

ಕಲಬುರಗಿ: ಇಲ್ಲಿನ ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕೀಲಿ ಒಡೆದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ ಒಂದು ಬೈಕ್ ಹಾಗೂ 16.50 ಲಕ್ಷ ರೂ. ಮೌಲ್ಯ ದ 165 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಇಲ್ಲಿನ ನಗರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ತಾಲೂಕಿನ ಕೋರವಾರದ ಇಮ್ರಾನ್ ಇಮಾಮಸಾಬ ವಗ್ದಾಲ ಹಾಗೂ ಎಸ್.ಎಂ ಕೃಷ್ಣ ಕಾಲನಿಯ ನಿವಾಸಿ ಶೇಖ್ ಅಲ್ತಾಫ್ ಅಲಿಯಾಸ್ ಅಲ್ತಾಸ್ ಅಮೀನಸಾಬ್ ಉಪ್ಪಾರ ಬಂಧಿತ ಆರೋಪಿಗಳಾಗಿದ್ದಾರೆ ಎಂದರು.
ಎಸ್.ಎಂ.ಕೃಷ್ಣ ನಗರದ ನಿವಾಸಿ ಸಿದ್ದಮ್ಮ ವಿಠ್ಠಲ ಬಿಲವಾಡ ನೀಡಿದ ದೂರಿನ ಮೇರೆಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖಾ ತಂಡ ರಚಿಸಲಾಗಿತ್ತು. ಡಬರಾಬಾದ್ ಕ್ರಾಸ್ ಸಮೀಪ ನಂಬರ್ ಪ್ಲೇಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬಯಲಾಗಿದೆ ಎಂದು ಎಸ್ಪಿ ಹೇಳಿದರು.
ಆರೋಪಿಗಳಿಂದ 45 ಗ್ರಾಂನ ಚಿನ್ನದ ಸರ, 30 ಗ್ರಾಂನ ತಾಳಿ ಸರ, 10 ಗ್ರಾಂ ಬೋರಮಳ, 20 ಗ್ರಾಂ 4 ಜೊತೆ ಕಿವಿಯೋಲೆ, 20 ಗ್ರಾಂ ನಕ್ಲೇಸ್, 30 ಗ್ರಾಂ ಬಳೆಗಳು, 10 ಗ್ರಾಂ ಬ್ರಾಸಲೆಟ್. ಹೀಗೆ ಒಟ್ಟು 16.50 ಲಕ್ಷ ರೂ. ಮೌಲ್ಯದ 165 ಗ್ರಾಂ ಚಿನ್ನಾಭರಣ ಹಾಗೂ ಬೈಕ್ ವೊಂದನ್ನು ವಶಕ್ಕೆ ಪಡೆಯುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಿ, ಪ್ರಶಂಶನಾ ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







