ಶ್ರಾವಣ ಮಾಸದ 30 ದಿನಗಳ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮ ಶ್ಲಾಘನೀಯ: ತಿಪ್ಪಣ್ಣಪ್ಪ ಕಮಕನೂರ

ಕಲಬುರಗಿ: ನಗರದ ಮಹಾದೇವಪ್ಪ ರಾಂಪುರೆ ಕುಡಾ ಬಡಾವಣೆಯಲ್ಲಿ ಕಳೆದ ಐದು ವರ್ಷಗಳಿಂದ ಶ್ರಾವಣ ಮಾಸದ ಅಂಗವಾಗಿ 30 ದಿನಗಳ ಕಾಲ ಪ್ರತಿದಿನ ವಿಶೇಷ ಉಪನ್ಯಾಸ ಹಾಗೂ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ಬಡಾವಣೆಯ ಔಷಧಿ ಭವನದಲ್ಲಿ ನಡೆದ ಐದನೇ ವರ್ಷದ ಶ್ರಾವಣ ಮಾಸದ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಯಶಸ್ಸಿಗೆ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ನೀಡುತ್ತಿರುವ ಸಹಕಾರ ಮೆಚ್ಚುವಂತದ್ದು ಎಂದರು. ಬಡಾವಣೆಯ ಅಭಿವೃದ್ಧಿಗೆ ಸಲ್ಲಿಸಿರುವ ಮನವಿಯಂತೆ ತಮ್ಮ ಅನುದಾನದಲ್ಲಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಶ್ರಾವಣ ಮಾಸದ ಸಂದರ್ಭದಲ್ಲಿ ಧಾರ್ಮಿಕ ಚಿಂತನೆಗಳ ಜತೆಗೆ ಸಾಮಾಜಿಕ ಮೌಲ್ಯಗಳು, ಸಂಸ್ಕೃತಿ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದು ಹೇಳಿದರು.
ಸ್ಪಂದನ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಡಾವಣೆಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ಬಾಬುರಾವ್ ಕುಲಕರ್ಣಿ ಮಾರ್ಗದರ್ಶಕರಾಗಿ, ನಾಗರಾಜ್ ಸುರಪುರ ಅಧ್ಯಕ್ಷರಾಗಿ ಹಾಗೂ ನಾಗೇಂದ್ರಪ್ಪ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಕೆಆರ್ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಾಜಿ ಕುಡಾ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಕೃಷ್ಣಾ ಜಿ. ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದು, ಸೊನ್ನದ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ದಾನಿಗಳು, ಪ್ರತಿಭಾವಂತ ವಿದ್ಯಾರ್ಥಿನಿಯರು ಹಾಗೂ ನಿವೃತ್ತರನ್ನು ಸನ್ಮಾನಿಸಲಾಯಿತು. ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ವಂದೇ ಮಾತರಂನೊಂದಿಗೆ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಶರಣಪ್ಪ ಕಟ್ಟಿಮನಿ, ಸಾಮಾಜಿಕ ಹೋರಾಟಗಾರ ಪಿಡ್ಡಪ್ಪ ಜಾಲಗಾರ, ವೆಂಕಟೇಶ್ ಅಡ್ವಾಣಿ, ವೀರೇಶ್ ಕ್ಷತ್ರೀಯ, ಗಣಪತಿ ಪೂಜಾರಿ, ನಾಗರಾಜ ಜಮಾದಾರಾಖಾನಿ, ನಾಗರಾಜ್ ಕುಲಕರ್ಣಿ ಸೇರಿದಂತೆ ಬಡಾವಣೆಯ ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ.ನಾಗರಾಜ್ ಬಡಿಗೇರ್ ನಿರ್ವಹಿಸಿದರು. ಡಾ.ಬಾಬುರಾವ್ ಕುಲಕರ್ಣಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀರೇಶ್ ಅರಿಕೇರಿ ವಂದಿಸಿದರು.






