Afzalpur | ದೇವರಾಜ ಅರಸು ವಸತಿ ಯೋಜನೆಯ ಫಲಾನುಭವಿಗಳಿಗೆ ತಕ್ಷಣ ಕಾರ್ಯದೇಶ ನೀಡುವಂತೆ ಬಿಜೆಪಿ ಆಗ್ರಹ

ಅಫಜಲಪುರ: ದೇವರಾಜ ಅರಸು ವಸತಿ ಯೋಜನೆಯಡಿ ಮಂಜೂರಾದ 500 ಮನೆಗಳ ಫಲಾನುಭವಿಗಳಿಗೆ ತಕ್ಷಣ ಕಾರ್ಯದೇಶ ನೀಡಬೇಕು, ಇಲ್ಲವಾದರೆ ರಾಜ್ಯ ಹೆದ್ದಾರಿಯಲ್ಲೇ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಎಚ್ಚರಿಕೆ ನೀಡಿದರು.
ತಾಲೂಕಿನ ಗೊಬ್ಬುರ (ಬಿ) ಗ್ರಾಮದ ಬಳಿ ಕಲಬುರಗಿ–ಅಫಜಲಪುರ ರಾಜ್ಯ ಹೆದ್ದಾರಿಯನ್ನು ತಡೆದು ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸ್ಥಳೀಯ ಶಾಸಕರು ಹಾಗೂ ಅವರ ಪುತ್ರರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭೀಮಾ–ಸೊನ್ನ ಬ್ಯಾರೇಜ್ನಿಂದ 54 ಕಿ.ಮೀ. ಉದ್ದದ ಕಾಲುವೆ ಇದ್ದರೂ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು, ಮೊದಲು ಅಫಜಲಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಕ್ಕದ ಆಳಂದ ತಾಲೂಕಿಗೆ ನೀರು ಹರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಅಫಜಲಪುರ ತಾಲೂಕಿನ ರೈತರು ಹಾಗೂ ಬಡಜನರ ಸಮಸ್ಯೆಗಳಿಗೂ ಆದ್ಯತೆ ನೀಡಬೇಕು. ರೈತರ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಮಂಜೂರಾದ ಅನುದಾನ ದುರ್ಬಳಕೆಯಾಗಿದೆ ಎಂದು ನಿತಿನ್ ಗುತ್ತೇದಾರ್ ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಧುಮತಿ ಪ್ರತಿಭಟನಾಕಾರರ ಅಹವಾಲು ಆಲಿಸಿ, 15 ದಿನಗಳೊಳಗೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣದ ಕಾರ್ಯದೇಶ ನೀಡಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ತಾಪಂ ಇಒ ಶಂಕರ ರಾಠೋಡ, ಡಿವೈಎಸ್ಪಿ ತಮ್ಮರಾಯ ಪಾಟೀಲ್, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸಂಗೀತಾ ಸಿಂಧೆ, ಸಂಗಮೇಶ, ಬಿಜೆಪಿ ತಾಲೂಕು ಅಧ್ಯಕ್ಷ ವಿದ್ಯಾಧರ ಮಂಗಳೂರೆ ಹಾಗೂ ಬಸವರಾಜ ಸಪ್ಪನಗೋಳ ಮಾತನಾಡಿದರು.
ಬಿಜೆಪಿ ಮುಖಂಡರಾದ ಸಿದ್ದು ದೇವತ್ಕಲ್, ಸುಭಾಷ್ ಚಂದ್ರ ರಾಠೋಡ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅವಣ್ಣ ಮ್ಯಾಕೇರಿ, ಪ್ರಭು ದೇವತ್ಕಲ್, ಬಸಲಿಂಗಪ್ಪ ದೇವತ್ಕಲ್, ಪ್ರವೀಣ್ ದೇವತ್ಕಲ್, ಗುರು ಸಾಲಿಮಠ, ಜ್ಯೋತಿ ಪ್ರಕಾಶ್ ಪಾಟೀಲ್, ಧಾನು ಪತಾಟೆ, ಶರಣು ಪದಕಿ, ಶಿವು ಪಡಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






