Afzalpur | ಶಾಶ್ವತ ನೀರಾವರಿಗಾಗಿ ರೈತರು ಪಕ್ಷಾತೀತವಾಗಿ ಹೋರಾಟ ನಡೆಸಬೇಕು : ಶ್ರೀಮಂತ ಬಿರಾದಾರ

ಅಫಜಲಪುರ: ತಾಲೂಕಿನ ಸಮಗ್ರ ಹಾಗೂ ಶಾಶ್ವತ ನೀರಾವರಿ ವ್ಯವಸ್ಥೆ ಜಾರಿಗೊಳಿಸಲು ರೈತರು ಪಕ್ಷಾತೀತವಾಗಿ ಸಂಘಟಿತರಾಗಿ ನಿರಂತರ ಹೋರಾಟ ನಡೆಸಬೇಕಾಗಿದೆ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ಹೇಳಿದರು.
ಪಟ್ಟಣದ ಅಳ್ಳಗಿ ಕ್ರಾಸ್ನಲ್ಲಿರುವ ಸ್ಪೂರ್ತಿ ಕಾಲೇಜಿನಲ್ಲಿ ಅಫಜಲಪುರ ತಾಲೂಕು ಸಮಗ್ರ ಶಾಶ್ವತ ನೀರಾವರಿ ಹೋರಾಟ ಸಮಿತಿ (ಕರ್ನಾಟಕ ಪ್ರಾಂತ ರೈತ ಸಂಘ ಸಂಯೋಜಿತ) ವತಿಯಿಂದ ಆಯೋಜಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಅಫಜಲಪುರ ತಾಲೂಕು ಪ್ರತಿವರ್ಷ ಬರಗಾಲದ ಸಂಕಷ್ಟ ಎದುರಿಸುತ್ತಿದೆ. ಸುಮಾರು 30 ವರ್ಷಗಳ ಹಿಂದೆ ಆರಂಭವಾದ ಭೀಮಾ ಏತ ನೀರಾವರಿ ಯೋಜನೆಯ ನೀರು ಇನ್ನೂ ರೈತರ ಜಮೀನುಗಳಿಗೆ ತಲುಪಿಲ್ಲ. ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರವೂ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಬಚಾವತ್ ತೀರ್ಪಿನ ಅನ್ವಯ ಭೀಮಾ ನದಿಗೆ 15 ಟಿಎಂಸಿ ನೀರನ್ನು ಹರಿಸುವಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಗುರು ಚಾಂದಕವಟೆ ಮಾತನಾಡಿ, ತಾಲೂಕಿನ ಕೆರೆಗಳನ್ನು ಹೂಳೆತ್ತಿ ನೀರು ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಬೇಕು. ಶಾಶ್ವತ ನೀರಾವರಿಯೇ ರೈತರ ಬದುಕಿಗೆ ಶಾಶ್ವತ ಪರಿಹಾರವಾಗಿದ್ದು, ಈ ಕುರಿತು ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದರು.
ನಾಮದೇವ ಕಡಕೋಳ ಹಾಗೂ ಭೀಮರಾವ ಗೌರ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಲು ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ಶಾಂತು ಅಂಜುಟಗಿ ಮಾತನಾಡಿ, ಭೀಮಾ ಏತ ನೀರಾವರಿ ಯೋಜನೆ, ಬಚಾವತ್ ತೀರ್ಪಿನನ್ವಯ ನೀರಿನ ಹಂಚಿಕೆ ಹಾಗೂ ರೈತರ ನ್ಯಾಯಸಮ್ಮತ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿ, ತಾಲೂಕಿನಲ್ಲಿ ಸಮಗ್ರ ಹಾಗೂ ಶಾಶ್ವತ ನೀರಾವರಿಗಾಗಿ ಹೋರಾಟ ಸಮಿತಿಯನ್ನು ಮತ್ತಷ್ಟು ಬಲಪಡಿಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಅಫಜಲಪುರ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಭೀಮರಾವ ಗೌರ, ಅಧ್ಯಕ್ಷರಾಗಿ ರಮೇಶ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮಂತ ಬಿರಾದಾರ, ಖಜಾಂಚಿಯಾಗಿ ಮುರುಗೇಂದ್ರ ಮಸಳಿ ಅವರನ್ನು ಆಯ್ಕೆ ಮಾಡಲಾಗಿದ್ದು, 51 ಸದಸ್ಯರ ಸಮಿತಿಯನ್ನೂ ರಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನೂರ್ ಅಹ್ಮದ್ ಭಾಗವಾನ್ ವಹಿಸಿದ್ದರು. ಶಿವಶರಣಪ್ಪ ಬುಜರಿ ಕಾರ್ಯಕ್ರಮ ಉದ್ಘಾಟಿಸಿದರು.
ಸಭೆಯಲ್ಲಿ ಬಸವರಾಜ ಘಾಣೂರ, ರಮೇಶ ಶೆಟ್ಟಿ, ನೂರ್ ಅಹ್ಮದ್ ಭಾಗವಾನ್, ನಾಮದೇವ ಕಡಕೋಳ, ಚಂದು ಕರಜಗಿ, ಲತೀಫ್ ಪಟೇಲ್, ಬಸಯ್ಯ ಆಕಾಶಮಠ, ಬಸವರಾಜ ಶಿರ್, ಆನಂದ ಪಾಟೀಲ, ಅಣ್ಣಾರಾವ ಪಾಟೀಲ, ಯಶವಂತ ಪಟ್ಟೇದಾರ, ಮಹಿಬೂಬ್ ನದಾಫ್, ಬಸವರಾಜ ವಾಳಿ, ಗುರುದತ್ತ ಪೂಜಾರಿ, ಕೆ.ಜಿ. ಪೂಜಾರಿ, ಚಂದು ಬನ್ನೆಟ್ಟಿ, ಶಿವಪುತ್ರಪ್ಪ ಬುರಲಿ, ದೌಲತ್ ಗೌಡ ಪಾಟೀಲ, ಶಾಂತಮಲ್ಲಪ್ಪ ಹೊನುಂಗರ, ಶಿವಾನಂದ ಹೊಟ್ಕರ್ ಸೇರಿದಂತೆ ರೈತ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.






