Afzalpur | ಹಿರೇಅಳ್ಳಗಿಯಲ್ಲಿ ಶ್ರೀ ಶಾಂತಲಿಂಗೇಶ್ವರ ಹಿರೇಮಠದ ಧಾರ್ಮಿಕ ಮಹೋತ್ಸವ ವಿಜೃಂಭಣೆ

ಅಫಜಲಪುರ : ತಾಲೂಕಿನ ಹಿರೇಅಳ್ಳಗಿ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಹಿರೇಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಜರುಗಿದವು.
ಮಹೋತ್ಸವದ ಅಂಗವಾಗಿ ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ ಶ್ರೀಶೈಲ ಮಹಾಪೀಠದ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಸೊನ್ನಲಾಪುರದ ಶ್ರೀ ಸಿದ್ಧರಾಮೇಶ್ವರ ಮಹಾಪುರಾಣದ ಮಹಾಮಂಗಲ ಕಾರ್ಯಕ್ರಮವೂ ಅಚ್ಚುಕಟ್ಟಾಗಿ ನಡೆಯಿತು. ರಾತ್ರಿ ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯರಿಗೆ ಭಕ್ತರಿಂದ ನಾಣ್ಯ ತುಲಾಭಾರ ಹಾಗೂ ಕಲ್ಲುಸಕ್ಕರೆ ತುಲಾಭಾರೋತ್ಸವ ನೆರವೇರಿಸಲಾಯಿತು.
ಮಂಗಳವಾರ ವಿವಿಧ ಮಠಾಧೀಶರು ಹಾಗೂ ಪೂಜ್ಯರ ದಿವ್ಯ ಸಾನ್ನಿಧ್ಯದಲ್ಲಿ ಬೃಹತ್ ಧರ್ಮಸಭೆ ನಡೆಯಿತು. ಆಶೀರ್ವಚನ ನೀಡಿದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಭಕ್ತಿ, ಸೇವೆ ಹಾಗೂ ಸತ್ಸಂಗದ ಮೂಲಕವೇ ದೇವರ ಅನುಗ್ರಹವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಧಾರ್ಮಿಕ ಮಹೋತ್ಸವದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಪೂಜೆ, ಪ್ರವಚನ, ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ, ಅಂಕಲಗಾ - ಅತನೂರಿನ ಶ್ರೀ ಗುರುಬಸವ ಶಿವಾಚಾರ್ಯರು, ಜೈನಾಪುರದ ರೇಣುಕ ಶಿವಾಚಾರ್ಯರು, ಮಲ್ಲಬಾದ ಗ್ರಾಮದ ರೇವಣಸಿದ್ಧ ಶಿವಾಚಾರ್ಯರು, ಮರತುರ ಗ್ರಾಮದ ಶ್ರೀಶೈಲ್ ಮಹಾಸ್ವಾಮಿಜಿ, ಚಿಂಚೋಳಿಯ ಗದ್ದುಗೆಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ಮುಗಳಿ ಗ್ರಾಮದ ಭೋಗೆಶ್ವರ ಶಿವಾಚಾರ್ಯರು, ಗೌರ ಬಿ ಯ ಕೈಲಾಸಲಿಂಗ ಶಿವಾಚಾರ್ಯರು, ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಹರಗುರುಚರ ಮೂರ್ತಿಗಳು ಹಾಗೂ ಮುಖಂಡರಾದ ಸಾಹೇಬ್ ಗೌಡ ಪಾಟೀಲ್, ಅರವಿಂದ್ ಹಾಳಕಿ, ನಾನಗೌಡ ಪಾಟೀಲ್, ಭೀಮರಾಯ ಬುಜರಿ, ಶಂಕರಗೌಡ ಪಾಟೀಲ್, ಕಲ್ಲಪ್ಪ ಚಿಕ್ಕಳಗಿ, ರಾಜಸಾಹುಕಾರ ಜಾಮಗೊಂಡ, ಕಲ್ಲಪ್ಪ ಬುಜರಿ, ಶಿವಶರಣಪ್ಪ ಬುಜರಿ, ದತ್ತು ಸಾಲೋಟಗಿ, ಶೇಕಣ್ಣ ತೆಗ್ಗೆಳ್ಳಿ, ರಮೇಶ್ ಸುರಗೊಂಡ, ಶರಣಬಸು ಹರಳಯ್ಯ ಮಹಾಂತಪ್ಪ ಕಂಬಾರ,ಪರಮಾನಂದ ಖೇಳಗಿ ಹಾಗೂ ಬಿಳಿವಸ್ತ್ರದಾರಿ ಹಣಮಂತ ಸೂರಗೊಂಡ ಸೇರಿದಂತೆ ಗ್ರಾಮದ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.






