ಅಫಜಲಪುರ | ಮಾತೋಳಿ ಗ್ರಾಮದಲ್ಲಿ ಹನುಮಾನ ಜಾತ್ರಾ ಮಹೋತ್ಸವ

ಅಫಜಲಪುರ: ತಾಲೂಕಿನ ಮಾತೋಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಹನುಮಾನ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಮಾ.24ರಿಂದ ಎ.4ರವರೆಗೆ ನಡೆದ ಈ ಜಾತ್ರಾ ಮಹೋತ್ಸವದ ಅಂಗವಾಗಿ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಮಹಾಪುರಾಣವನ್ನು ಪ್ರತಿದಿನ ಪ್ರವಚನಕಾರರಾದ ಶಿವಬಸಯ್ಯ ಶಾಸ್ತ್ರಿಗಳು ಕಳ್ಳಿಮಠ ಅವರು ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಭಾಗಣ್ಣ ಗವಾಯಿ ಅವರಳ್ಳಿ ಹಾಗೂ ಈರಣ್ಣ ಅತನೂರ ಸಂಗೀತ ಸಹಕಾರ ನೀಡಿದರು.
ಜಾತ್ರೆಯ ಪ್ರಮುಖ ದಿನಗಳಾದ ಏಪ್ರಿಲ್ 2ರಂದು ಹನುಮಾನ ಮೂರ್ತಿಗೆ ರುದ್ರಾಭಿಷೇಕ, ನಂದಿಕೋಲು ಮೆರವಣಿಗೆ ಹಾಗೂ ಸಂಜೆ ತೊಟ್ಟಿಲ ಕಾರ್ಯಕ್ರಮ ನೆರವೇರಿತು. ಏಪ್ರಿಲ್ 3ರಂದು ಮದ್ದು ಸುಡುವ ಕಾರ್ಯಕ್ರಮ ಮತ್ತು ಮಹಾರಥೋತ್ಸವ ಜರುಗಿದ್ದು, ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ಬಜರಂಗಬಲಿಯ ದರ್ಶನ ಪಡೆದು ಭಕ್ತಿ ಭಾವದಲ್ಲಿ ತೇಲಿದರು. ರಥೋತ್ಸವದ ಬಳಿಕ ಪುರಾಣಮಂಗಲ ಮತ್ತು ಧರ್ಮಸಭೆ ನಡೆಯಿತು.
ಏಪ್ರಿಲ್ 4ರಂದು ಈ ಭಾಗದ ಪ್ರಸಿದ್ಧ ಜಂಗಿ ಪೈಲ್ವಾನ್ರ ಕುಸ್ತಿ ಪಂದ್ಯ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಾತ್ರಾ ಮಹೋತ್ಸವಕ್ಕೆ ವಿವಿಧ ಮಠಗಳ ಪೂಜ್ಯರು ಹಾಗೂ ಧಾರ್ಮಿಕ ಮುಖಂಡರು ದಿವ್ಯ ಸಾನಿಧ್ಯ ವಹಿಸಿದ್ದರು. ರಥೋತ್ಸವವನ್ನು ನೆರವೇರಿಸಿದ ಮಹಾಂತ ಮಠದ ವೀರಮಹಂತ ಶಿವಾಚಾರ್ಯರು ಭಕ್ತರಿಗೆ ಆಶೀರ್ವಚನ ನೀಡಿದರು.
ಈ ವೇಳೆ ಸುಮಂಗಲೆಯರು ಪೂರ್ಣಕುಂಭ ಕಳಸಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಅನೇಕ ಪುರವಂತರು ತಮ್ಮ ಕಲೆಗಳನ್ನು ಪ್ರದರ್ಶಿಸಿದರು. ಮದ್ದು ಸುಡುವ ಕಾರ್ಯಕ್ರಮವೂ ಗಮನಸೆಳೆದಿತು.
ಪ್ರತಿವರ್ಷದಂತೆ ಹನುಮಾನ ಜಯಂತಿ ಅಂಗವಾಗಿ ಆರಂಭವಾಗುವ ಈ ಜಾತ್ರೆ, ಇಂದು ರಾತ್ರಿ ನಡೆಯುವ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಭವ್ಯವಾಗಿ ಮುಕ್ತಾಯಗೊಳ್ಳಲಿದೆ ಎಂದು ಜಾತ್ರಾ ಸಮಿತಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.







