ಅಫಜಲಪುರ | ದಾರ್ಶನಿಕರ ತತ್ವಾದರ್ಶ ಬದುಕಲ್ಲಿ ಅಳವಡಿಸಿಕೊಳ್ಳಿ: ಎಂ.ಎಸ್.ರಾಜೇಶ್ವರಿ

ಅಫಜಲಪುರ: ಭಾರತದಲ್ಲಿ ಸಮಾಜದ ಸುಧಾರಣೆಗಾಗಿ ಜನಿಸಿದ ದಾರ್ಶನಿಕರ ಸಂಖ್ಯೆ ಅಪಾರವಾಗಿದೆ. ಅವರನ್ನು ಕೇವಲ ಜಯಂತಿಗಳಂದು ಸ್ಮರಿಸುವುದಕ್ಕೆ ಸೀಮಿತವಾಗದೆ, ಅವರ ತತ್ವಾದರ್ಶಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಉಪನ್ಯಾಸಕಿ ಎಂ.ಎಸ್. ರಾಜೇಶ್ವರಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ಸ್ವಾಮಿ ವಿವೇಕಾನಂದ ಜಯಂತಿ' ಹಾಗೂ 'ರಾಷ್ಟ್ರೀಯ ಯುವ ದಿನ'ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ನೀಡಿದ ದಿಕ್ಸೂಚಿ ಭಾಷಣ ಇಂದಿಗೂ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿದೆ. ಇದು ಅವರ ಮಾತು ಮತ್ತು ವ್ಯಕ್ತಿತ್ವದ ತೂಕವನ್ನು ಎತ್ತಿ ತೋರಿಸುತ್ತದೆ. ವಿದ್ಯಾರ್ಥಿಗಳು ಕೇವಲ ಹಾರ-ತುರಾಯಿ, ಪೂಜೆಗಳಿಗೆ ಸೀಮಿತವಾಗದೆ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು. ಅಂದಾಗ ಮಾತ್ರ ಸದೃಢ ಭಾರತ ಕಟ್ಟಲು ಸಾಧ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಉಪನ್ಯಾಸಕ ಡಾ.ಸಂಗಣ್ಣ ಎಂ. ಸಿಂಗೆ ಆನೂರ, ಉಕ್ಕಿನಂತಹ ದೇಹದ ಯುವಜನತೆ ಸಿಕ್ಕರೆ ದೇಶದ ದಿಕ್ಕನ್ನೇ ಬದಲಿಸುತ್ತೇನೆ ಎಂಬ ಕ್ರಾಂತಿಕಾರಿ ಸಂದೇಶ ನೀಡಿದ ವಿವೇಕಾನಂದರು ಇಂದಿನ ಯುವ ಪೀಳಿಗೆಗೆ ಮಾದರಿ. ಜಗತ್ತಿನ ಶ್ರೇಷ್ಠ ಚಿಂತನೆಗಳನ್ನೆಲ್ಲ ದಾರ್ಶನಿಕರು ಈಗಾಗಲೇ ಹೇಳಿದ್ದಾರೆ, ಈಗ ಅವುಗಳ ಪಾಲನೆ ಮಾತ್ರ ಬಾಕಿ ಉಳಿದಿದೆ ಎಂದರು.
ಗ್ರಂಥಪಾಲಕಿ ಡಾ. ಸಾವಿತ್ರಿ ಕೃಷ್ಣ ಅವರು ವಿವೇಕಾನಂದರ ಜೀವನ ಚರಿತ್ರೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಸೂರ್ಯಕಾಂತ ಉಮಾಪುರೆ, ಡಾ. ಶಾಂತಪ್ಪ ಮೇಲ್ಕೇರಿ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







