Afzalpur | ಸಮಾಜ ಸೇವೆಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ: ಸುಖದೇವ ಕಟ್ಟಿಮನಿ

ಅಫಜಲಪುರ : ಸಮಾಜ ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಸಾಮಾಜಿಕ ಕಳಕಳಿ ಬೆಳೆಯುತ್ತದೆ ಎಂದು ಕಲಬುರಗಿ ನಗರದ ಪಾರಸ್ ಎಂ.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಂಶುಪಾಲ ಸುಖದೇವ ಕಟ್ಟಿಮನಿ ಹೇಳಿದರು.
ತಾಲೂಕಿನ ದೇವಲ ಗಾಣಗಾಪೂರದ ಯತಿರಾಜ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಾರ್ಥ್ ಕರ್ನಾಟಕ ಡೆಕ್ಕನ್ ಫೌಂಡೇಶನ್, ಪಾರಸ್ ಸಮಾಜ ಕಾರ್ಯ ಮಹಾವಿದ್ಯಾಲಯ ಕಲಬುರಗಿ ಹಾಗೂ ಮಹಾತ್ಮಾ ಗಾಂಧಿ ಸಮಾಜ ಕಾರ್ಯ ಮಹಾವಿದ್ಯಾಲಯ ಅಫಜಲಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಸಮಾಜ ಕಾರ್ಯ ಶಿಬಿರ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಮಾಜ ಸೇವೆಯೇ ಶ್ರೇಷ್ಠ ಸೇವೆಯಾಗಿದ್ದು, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವದ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವ ಮಹತ್ವದ ವೇದಿಕೆಗಳಾಗಿವೆ” ಎಂದು ಹೇಳಿದರು.
ಪಾರಸ್ ಸಮಾಜ ಕಾರ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ರಾಜಕುಮಾರ ಬಳೂರ್ಗಿ ಮಾತನಾಡಿ, ಗ್ರಾಮೀಣ ಸಮಸ್ಯೆಗಳನ್ನು ಅರಿತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವ ಮನೋವೃತ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಶಿಬಿರದ ಸಹ ನಿರ್ದೇಶಕಿ ಬಸೀರಾ ಗೊಟ್ಯಾಳ ಮಾತನಾಡಿ, ಸಮಾಜ ಕಾರ್ಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಜನಸೇವೆಯ ಚಿಂತನೆಗಳನ್ನು ಗಟ್ಟಿಗೊಳಿಸುತ್ತವೆ ಎಂದರು.
ಉಪನ್ಯಾಸಕರಾದ ಗುರು ಗಂಗನಳ್ಳಿ ಹಾಗೂ ಪ್ರಭು ಬಿರದಾರ ಶಿಬಿರದ ಮಹತ್ವವನ್ನು ವಿವರಿಸಿದರು.
ಶಿಬಿರದಲ್ಲಿ ಸ್ವಚ್ಛತಾ ಅಭಿಯಾನ, ವರದಕ್ಷಿಣೆ ಪೀಡನೆ, ಸಾರಾಯಿ ನಿಷೇಧ ಹಾಗೂ ಬಾಲಕಿಯರ ಮೇಲಿನ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯಿತು.
ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ ಕಂಟಿ ಮಾತನಾಡಿದರು. ಶಿಬಿರದ ಉದ್ದೇಶವನ್ನು ಜೈ ಭೀಮ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಮೈನಾಜ್ ಬೇಗಂ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜ್ಯೋತಿ ಅಲಂಕಾರ ಸ್ವಾಗತಿಸಿದರು. ಚಂದ್ರಕಲಾ ಹಾಗೂ ಸೌಜನ್ಯ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಶಿಬಿರಾರ್ಥಿ ಸಿದ್ದರಾಮ ಶಿವಣಗಿ ನಿರೂಪಿಸಿದರು. ಅಪರಂಜಿ ಮೇತ್ರಿ ವಂದನಾರ್ಪಣೆ ಸಲ್ಲಿಸಿದರು.






