ಅಫಜಲಪುರ | ಮದ್ಯ ಸೇವನೆಯಿಂದ ದೂರವಿದ್ದು, ಗೌರವಯುತ ಜೀವನ ಸಾಗಿಸಿ: ಶರಣಪ್ಪ ಸಲದಾಪುರ

ಕಲಬುರಗಿ: ಮದ್ಯಪಾನ ಸೇವಿಸುವುದರಿಂದ ಅನಾರೋಗ್ಯ ಜತೆಗೆ ಸಮಾಜದಲ್ಲಿ ನಮ್ಮ ಗೌರವಕ್ಕೂ ಧಕ್ಕೆ ಬರುತ್ತದೆ. ಮದ್ಯಪಾನ ತ್ಯಜಿಸುವ ಮೂಲಕ ಗೌರವಯುತ ಬದುಕು ಸಾಗಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಸಲಹೆ ನೀಡಿದರು.
ಅಫಜಲಪುರ ಪಟ್ಟಣದ ಶ್ರೀಗುರು ಮಳೇಂದ್ರ ಶಿವಾಚಾರ್ಯರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಿಗುವ ಮದ್ಯಗಳಲ್ಲಿ ಯಾವುದು ಅಸಲಿ ಯಾವುದು ನಕಲಿ ಎಂದು ಗುರುತಿಸಲು ಆಗದಷ್ಟು ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲ ಮದ್ಯ ಮಾರಾಟಗಾರರು ನಕಲಿ ಮದ್ಯ ಸರಬರಾಜು ಮಾಡುತ್ತಿರುವ ಶಂಕೆ ಇದೆ. ನಕಲಿ ಮದ್ಯ ಸೇವಿಸಿದ ವ್ಯಕ್ತಿ ಕೆಲವೇ ವರ್ಷಗಳಿ ಜೀವ ಬಿಡಬೇಕಾಗುತ್ತದೆ. ಕುಡಿತಕ್ಕೆ ಬಲಿಯಾಗುವ ವ್ಯಕ್ತಿಯ ಕುಟುಂಬ ಬೀದಿಗೆ ಬರುತ್ತದೆ. ಆದ್ದರಿಂದ ನಂಬಿದವರನ್ನು ಸಂಕಷ್ಟಕ್ಕೆ ತಳ್ಳದೇ ಮದ್ಯವನ್ನು ತ್ಯಜಿಸಿ ನೆಮ್ಮದಿಯಾಗಿ ಬಾಳಲು ಮುಂದಾಗಬೇಕು ಎಂದು ತಿಳಿಸಿದರು.
ನಾನು ಮದ್ಯಪಾನ ನಿಷೇಧಕ್ಕಾಗಿ ಬಹಳಷ್ಟು ಹೋರಾಟಗಳನ್ನು ಮಾಡುತ್ತ ಬಂದಿದ್ದೇನೆ. ಇಂದು ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಉದ್ದೇಶ ಧರ್ಮಸ್ಥಳ ಸಂಸ್ಥೆಯವರು ಮದ್ಯ ವರ್ಜನ ಶಿಬಿರ ಮಾಡಿ ಸುಮಾರು 40 ಜನರ ಬದುಕನ್ನು ಹಸನು ಮಾಡಿದ್ದಾರೆ ಎನ್ನುವ ಖುಷಿಗಾಗಿ ಭಾಗಿದ್ದೇನೆ ಎಂದರು.
ಮನುಷ್ಯನಿಗೆ ಸಂಸ್ಕಾರ ಅತಿ ಎತ್ತರಕ್ಕೆ ಕೊಂಡೊಯುತ್ತದೆ. ಧರ್ಮಸ್ಥಳ ಸಂಸ್ಥೆ ಸಂಸ್ಕಾರ ಎಂಬ ಆಸ್ತಿ ನಮಗೆ ಕಲಿಸುತ್ತದೆ. ಇದರ ಸದುಪಯೋಗ ನಾವು ಪಡೆದುಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ದಿನೇಶ ಪ್ರಾಚಾರಿ ಮಾತನಾಡಿದರು. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು.







