ಅಫಜಲಪುರ | ಗುಟ್ಕಾ ತಿನ್ನಬೇಡ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಕಲಬುರಗಿ: ಅಜ್ಜಿ ಗುಟ್ಕಾ ತಿನ್ನಬೇಡ ಎಂದಿದ್ದಕ್ಕೆ ಮೊಮ್ಮಗನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ರೋಹಿತ್ ಈರಣ್ಣ ಮಣ್ಣಅಂಕಲಗಿ(15) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರೋಹಿತ್, ನಿರಂತರವಾಗಿ ಗುಟ್ಕಾ ತಿನ್ನುತ್ತಿರುವುದರಿಂದ ಆತನ ಸ್ನೇಹಿತರು ಆತನ ಅಜ್ಜಿಗೆ, 'ನಿಮ್ಮ ಮೊಮ್ಮಗ ದಿನಾಲೂ ಗುಟ್ಕಾ ತಿನ್ನುತ್ತಿದ್ದಾನೆ' ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಅಜ್ಜಿ ದಮ್ಮಯಂತಿ ಅವರು, ಮೊಮ್ಮಗ ರೋಹಿತ್ ಗೆ ಗದರಿಸಿ ಬುದ್ದಿ ಮಾತು ಹೇಳಿ ಮಾರುಕಟ್ಟೆಗೆ ಹೋಗಿದ್ದಾರೆ. ಇದರಿಂದ ರೋಹಿತ್ ಮನನೊಂದು ಮನೆಯಲ್ಲಿ ಕೊರಳಿಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.





