ಅಫಜಲಪುರ | ವಿದ್ಯಾರ್ಥಿಗಳ ಸಾಧನೆಯೇ ನಿಜವಾದ ಗುರುವಂದನೆ : ತಹಶೀಲ್ದಾರ್ ದಾಸರ

ಅಫಜಲಪುರ : 2004–05ನೇ ಸಾಲಿನ ಅಫಜಲಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು, ತಂದೆ-ತಾಯಿ-ಗುರುಗಳ ಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಗುರುವಿನ ಸ್ಥಾನ ಅತ್ಯಂತ ದೊಡ್ಡದು. ಅವರ ನಿಸ್ವಾರ್ಥ ಸೇವೆಯಿಂದ ಅನೇಕ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜ್ಯೋತಿ ಬೆಳಗಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ.ನಾರಾಯಣ ರೋಳೇಕರ ಅವರು, 20 ವರ್ಷಗಳ ನಂತರ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಗೌರವಿಸುತ್ತಿರುವುದು ನಮಗೆ ತಮ್ಮನ್ನೇ ಗೌರವಿಸಿಕೊಂಡಂತಾಗಿದೆ. ಪ್ರತಿ ವಿದ್ಯಾರ್ಥಿಯ ಸಾಧನೆಯಲ್ಲಿ ಗುರು ತನ್ನ ಸಾರ್ಥಕತೆಯನ್ನು ಕಂಡು ಖುಷಿಪಡುತ್ತಾನೆ ಎಂದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಬ್ರವಿಶ್ವಾರಾಧ್ಯ ಮಲೆಂದ್ರ ಶಿವಾಚಾರ್ಯರು ಅವರು, ಗುರುವಿನಿಂದ ಪಡೆದ ಶಿಕ್ಷಣದ ಫಲವಾಗಿ ನೀವು ಉಪನ್ಯಾಸಕರು, ಶಿಕ್ಷಕರು, ಪೊಲೀಸ್ರು, ಅಧಿಕಾರಿಗಳು, ರೈತರು, ಉದ್ಯಮಿಗಳಾಗಿದ್ದೀರಿ. ಅದರ ಜೊತೆಗೆ ಬದುಕಿನ ಸಂಸ್ಕಾರಗಳನ್ನು ನಿಮ್ಮ ಮಕ್ಕಳಿಗೂ ಕಲಿಸಿ ಕೊಡಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ವಿದ್ಯಾರ್ಥಿ ಬಾಪುಗೌಡ ಬಿರಾದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಪಾಠ ಕಲಿಸಿದ ಗುರುಗಳಾದ ಪ್ರಾಂಶುಪಾಲ ಶಾಂತರಸ ಹೊಸಮನಿ, ಉಪನ್ಯಾಸಕಿ ಲಲಿತಾ ಚೆಟ್ಟಿ, ಉಪನ್ಯಾಸಕ ಪ್ರಕಾಶ ಜಮಾದಾರ, ಹೀರೂ ರಾಠೋಡ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಜಿ.ಎಂ.ಸಾಲಿಮಠ ವಹಿಸಿದ್ದರು.
ಅತಿಥಿಗಳಾಗಿ ಎಚ್.ಎಸ್.ಪಾಟೀಲ್, ಪ್ರಶಾಂತ ಬಿಂದಗೆ, ಚಿದಾನಂದ ಕೆಳಗಿನತೋಟ, ಜ್ಯೋತಿಲಕ್ಷ್ಮಿ ಬಿರಾದಾರ ಉಪಸ್ಥಿತರಿದ್ದರು. ಗೌತಮ್ಮ ಸಕ್ಕರಗಿ, ಶಿವರಾಯಗೌಡ, ದಾನಮ್ಮ ನೂಲಾ ಅನಿಸಿಕೆ ವ್ಯಕ್ತಪಡಿಸಿದರು ಶ್ರೀಕಾಂತ್ ಚಾಂದಕವಠೆ ಸ್ವಾಗತಿಸಿದರು. ರೂಪಾ ಹಿರೇಮಠ ಹಾಗೂ ಚಂದ್ರಕಾಂತ ಪ್ಯಾಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಹೇಶ ರಾಂಪುರ ವಂದಿಸಿದರು ಹಳೆಯ ವಿದ್ಯಾರ್ಥಿ ಸ್ನೇಹಿತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.







