ಅಫಜಲಪುರ: ಶಾಶ್ವತ ನೀರಾವರಿ ಕಲ್ಪಿಸಲು ಕಬ್ಬು ಬೆಳೆಗಾರರ ಸಂಘದ ಆಗ್ರಹ

ಅಫಜಲಪುರ: ತಾಲೂಕಿನಲ್ಲಿ ಪ್ರತಿ ವರ್ಷ ಎದುರಾಗುತ್ತಿರುವ ಬರಗಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಮಗ್ರ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಬುಧವಾರ ಉಪ ತಹಶೀಲ್ದಾರ್ ಮೂಲಕ ಶಾಸಕ ಎಂ.ವೈ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ ಸಂಜೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಯಿತು.
ಈಗಾಗಲೇ ನಿರ್ಮಾಣಗೊಂಡಿರುವ ಭೀಮಾ ಏತ ನೀರಾವರಿ ಯೋಜನೆ ಜನರಿಗೆ ಸಂಪೂರ್ಣ ಪ್ರಯೋಜನಕಾರಿಯಾಗಬೇಕಾದರೆ ಸೊನ್ನ ಬ್ಯಾರೇಜ್ನಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹಿಸಿ, ಕಾಲುವೆಗಳನ್ನು ಸ್ವಚ್ಛಗೊಳಿಸಿ ನಿರಂತರವಾಗಿ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಉಜನಿ ಜಲಾಶಯದಿಂದ ಭೀಮಾ ನದಿಗೆ ಜಿಲ್ಲೆಯ ಪಾಲಿನ 15 ಟಿಎಂಸಿ ನೀರನ್ನು ಪ್ರತಿವರ್ಷ ತರಲು ಸರ್ಕಾರದ ಮಟ್ಟದಲ್ಲಿ ವಿಶೇಷ ನಿಯೋಗ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆ ಈಡೇರದಿದ್ದಲ್ಲಿ ಆಳಂದ ಕೆರೆ ತುಂಬುವ ಯೋಜನೆಗೆ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಫಜಲಪುರ ತಾಲೂಕಿನ ಕೆರೆಗಳ ಹೂಳು ತೆಗೆಯುವುದು, ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವುದು ಹಾಗೂ ಯಾವುದೇ ಭ್ರಷ್ಟಾಚಾರವಿಲ್ಲದೆ ಕಾಮಗಾರಿ ನಡೆಸಿ ಶಾಶ್ವತವಾಗಿ ನೀರು ಸಂಗ್ರಹವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಮರ್ಜಾ ಹಾಗೂ ಬೋರಿ ನದಿಗಳು ಹೂಳು ತುಂಬಿ ಹಾಳಾಗಿರುವ ಹಿನ್ನೆಲೆಯಲ್ಲಿ ಅವುಗಳ ಪುನರುಜ್ಜೀವನ ಕೈಗೊಂಡು, ಪ್ರತಿ 500 ಮೀಟರ್ ಅಂತರದಲ್ಲಿ ಬ್ಯಾರೇಜ್-ಕಮ್-ಬ್ರಿಜ್ ನಿರ್ಮಿಸಿ ನೀರನ್ನು ತಡೆಹಿಡಿಯುವ ಮೂಲಕ ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮುಂಗಾರು ಮಳೆ ಕೊರತೆಯಿಂದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಬೇಕು ಹಾಗೂ ರೈತರ ಸಾಲಮನ್ನಾಕ್ಕೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮಂತ ಬಿರಾದಾರ, ರಮೇಶ್ ಶೆಟ್ಟಿ, ರಮೇಶ್ ಪಾಟೀಲ್, ಮುರುಘೇಂದ್ರ ಮಸಳಿ, ನೂರ ಅಹ್ಮದ್ ಬಾಗವಾನ, ಚಂದ್ರಶೇಖರ ಕರಜಗಿ, ಲತೀಫ್ ಪಟೇಲ್, ಬಸವರಾಜ, ನಾಮದೇವ ಕಡಕೋಳ, ಭೀಮರಾಯ ಗೌರ, ಆನಂದ ಪಾಟೀಲ್, ಈರಣ್ಣ ದೊಡ್ಮನಿ, ಕಲ್ಲಪ್ಪ ಅಜುಂಟಗಿ, ದತ್ತುಗುರು ಬಿದನೂರ, ಗುರು ಹುಲ್ಲೂರ, ಅಣ್ಣಾರಾಯ ಪಾಟೀಲ್, ಗುರು ಚಾಂದಕವಟೆ, ಸುರೇಶಗೌಡ ಪಾಟೀಲ್, ರಾಜಕುಮಾರ ಬಡದಾಳ, ಶಿವಪುತ್ರ ಬುರಲಿ, ಬಸು ವಾಳಿ ಸೇರಿದಂತೆ ಹಲವಾರು ರೈತ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.






