ಅಫಜಲಪುರ| ಧಾರಾಕಾರ ಮಳೆ : ಹರಿಯುತ್ತಿರುವ ಹಳ್ಳದಲ್ಲೇ ತರಕಾರಿ ಸಾಗಿಸಿದ ರೈತರು

ಕಲಬುರಗಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಇತ್ತ ಮಳೆಯಿಂದಾಗಿ ತುಂಬು ಹರಿಯುತ್ತಿರುವ ಹಳ್ಳದಲ್ಲೇ ರೈತರು ಬೆಳೆದ ತರಕಾರಿ ಕಲಬುರಗಿ ನಗರದ ಮಾರುಕಟ್ಟೆಗೆ ಸಾಗಣೆ ಮಾಡಲು ಪರದಾಡಿರುವ ಘಟನೆ ಅಫಜಲಪುರ ತಾಲ್ಲೂಕಿನ ನೀಲೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಗೊಬ್ಬುರದ ಹಳ್ಳದಲ್ಲಿ ರೈತರು ತಮ್ಮ ಭೂಮಿಯಲ್ಲಿ ಬೆಳೆದಿರುವ ತರಕಾರಿಗಳನ್ನು ಕಲಬುರಗಿ ಮಾರುಕಟ್ಟೆಗೆ ಸಾಗಿಸಲು ನಿರತರಾಗಿದ್ದರು. ಆದರೆ ಧಾರಾಕಾರ ಮಳೆಯಿಂದಾಗಿ ಅಲ್ಲಿನ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಅಂತಹ ಹಳ್ಳದಲ್ಲೇ ರೈತರು ತರಕಾರಿ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಮುತ್ತಲೂ ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಕೆಲವು ರಸ್ತೆಗಳು ಕೊಚ್ಚಿಕೊಂಡು ಹೋಗಿರುವುದರಿಂದ ಅಲ್ಲಿಂದ ಹಾದುಹೋಗುವುದು ತುಂಬಾ ಕಷ್ಟಕರವಾಗಿದೆ.
ಭಾರೀ ಮಳೆಯಿಂದಾಗಿ ಈ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದ ಬೆಳೆ ಹಾನಿಗೀಡಾಗಿದೆ, ರಸ್ತೆಗಳು ಹದಗೆಟ್ಟಿವೆ, ಈ ಕೂಡಲೇ ತರಕಾರಿ ಸಾಗಾಟ, ಸಂಚಾರಕ್ಕೆ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಬೇಕು, ಹಳ್ಳ ದಾಟಲು ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಅಲ್ಲಿನ ನಿವಾಸಿ ಶರಣು ಹಾಳಮಳ್ಳಿ ಒತ್ತಾಯಿಸಿದ್ದಾರೆ.





