Afzalpur | ಸಾಲಬಾಧೆಯಿಂದ ಯುವ ರೈತ ಆತ್ಮಹತ್ಯೆ

ಅಫಜಲಪುರ: ಭೀಕರ ಬರಗಾಲದಿಂದ ಬೆಳೆಗಳು ಒಣಗಿ ಹೋಗಿರುವ ಹಿನ್ನೆಲೆಯಲ್ಲಿ ಸಾಲದ ಒತ್ತಡದಿಂದ ಮನನೊಂದ ಯುವ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾತೋಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಾತೋಳಿ ಗ್ರಾಮದ ಸಿದ್ದರಾಮ ಸೈಬಣ್ಣ ನಂದಗೇರಿ (34) ಎಂದು ಗುರುತಿಸಲಾಗಿದೆ. ಸಿದ್ದರಾಮ ಅವರು ಬ್ಯಾಂಕ್ ಹಾಗೂ ಖಾಸಗಿ ಮೂಲಗಳಿಂದ ಒಟ್ಟು ಸುಮಾರು 9 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಬಾರಿ ಉತ್ತಮ ಮಳೆಯಾಗಿ ಉತ್ತಮ ಬೆಳೆ ಬಂದರೆ ಸಾಲದ ಒಂದಿಷ್ಟು ಭಾಗವನ್ನಾದರೂ ತೀರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರು, ಮಳೆ ಕೊರತೆಯಿಂದ ಬರಗಾಲ ಆವರಿಸಿ ಹೊಲದಲ್ಲಿದ್ದ ಬೆಳೆಗಳು ಒಣಗುತ್ತಿರುವುದನ್ನು ಕಂಡು ತೀವ್ರ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಶನಿವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಸಾಲದ ಒತ್ತಡ ಹಾಗೂ ಬೆಳೆ ನಷ್ಟವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




