Aland | ಮುಂಗಾರು ಹಂಗಾಮಿಗೆ ಅರಣ್ಯ ಇಲಾಖೆ ಸಜ್ಜು: ಸಾವಿರಾರು ಸಸಿ ನೆಡುವ ಗುರಿ

ಆಳಂದ: ಮುಂಗಾರು ಹಂಗಾಮು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅರಣ್ಯ ವಿಸ್ತರಣೆ ಹಾಗೂ ಹಸಿರು ಸಂರಕ್ಷಣೆಗೆ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ಭಾರೀ ಪ್ರಮಾಣದಲ್ಲಿ ಸಸಿ ಉತ್ಪಾದನೆ ಹಾಗೂ ನೆಡುವ ಕಾಮಗಾರಿಗಳಿಗೆ ಸಿದ್ಧತೆ ನಡೆಸಿವೆ.
ರಸ್ತೆ ಬದಿಗಳು, ಅರಣ್ಯ ಪ್ರದೇಶಗಳು, ಸರ್ಕಾರಿ ಜಮೀನುಗಳು, ಶಾಲಾ-ಕಾಲೇಜು ಆವರಣಗಳು ಹಾಗೂ ರೈತರ ಹೊಲಗಳಲ್ಲಿ ಹಸಿರು ವಾತಾವರಣ ನಿರ್ಮಿಸುವ ಉದ್ದೇಶದಿಂದ ಸಾವಿರಾರು ಸಸಿಗಳನ್ನು ಬೆಳೆಸಲಾಗಿದ್ದು, ಮಳೆಯ ಆರಂಭದ ಬಳಿಕ ಹಂತ ಹಂತವಾಗಿ ನೆಡುವ ಕಾರ್ಯ ಕೈಗೊಳ್ಳಲಾಗುತ್ತದೆ.
ಈಚೆಗೆ ಕೊರಳ್ಳಿ ಸಸಿ ಕ್ಷೇತ್ರಕ್ಕೆ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪ್ರಾದೇಶಿಕ ವಲಯದ ಆರ್ಎಫ್ಒ ಶಾಂತರೆಡ್ಡಿ ಸಸಿ ಉತ್ಪಾದನೆ, ನಿರ್ವಹಣೆ ಹಾಗೂ ಮುಂಗಾರು ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
ಮಳೆಗಾಲ ಆರಂಭವಾದ ತಕ್ಷಣ ಸಸಿ ನೆಡುವ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಹಾಗೂ ಸಸಿಗಳ ಸಂರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಪ್ರಾದೇಶಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 1,500 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಟ್ರೀ ಕವರ್ ಮತ್ತು ಕ್ಯಾನೋಪಿಂಗ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭೂಸನೂರ, ಕಡಗಂಚಿ ಹಾಗೂ ಗೋಳಾ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ಗುಂಡಿ ತೋಡುವ ಕಾಮಗಾರಿ ಪೂರ್ಣಗೊಂಡಿದ್ದು, ಬೇವು, ಹೊಂಗೆ, ತಪ್ಸೆ, ನೀಲ್, ನೆರಳೆ, ಮಹಾಗನಿ ಸೇರಿದಂತೆ ವಿವಿಧ ಜಾತಿಯ ಸುಮಾರು 12 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದನಹಿಪ್ಪರಗಾ ವಲಯದಲ್ಲಿ ಪ್ರಮುಖ ರಸ್ತೆ ಮಾರ್ಗಗಳು ಹಾಗೂ ಮುನ್ನೊಹಳ್ಳಿ ರಸ್ತೆ ಬದಿಗಳಲ್ಲಿ ನೆಡುತೋಪ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಳೆದ ಸಾಲಿನಲ್ಲಿ ವಾಗ್ದರಿ–ರಿಬ್ಬನಪಲ್ಲಿ–ಕಲಬುರಗಿ–ಆಳಂದ ದ್ವಿಪಥ ಹೆದ್ದಾರಿ ಬದಿಯಲ್ಲಿ ನೆಟ್ಟ ಗಿಡಗಳು ಇಲಾಖೆಯ ಸಮರ್ಪಕ ನಿರ್ವಹಣೆಯಿಂದ ಉತ್ತಮವಾಗಿ ಬೆಳೆಯುತ್ತಿರುವುದು ಗಮನಾರ್ಹವಾಗಿದೆ.
ಆದರೆ ಅರಣ್ಯ ಅಭಿವೃದ್ಧಿಗೆ ಅಗತ್ಯ ಜಾಗದ ಕೊರತೆ, ಸರ್ಕಾರದ ಅನುದಾನದ ಅಭಾವ ಹಾಗೂ ಸಸಿ ಉತ್ಪಾದನೆ ಕುಸಿತ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಕಳೆದ ವರ್ಷ ಸುಮಾರು 60 ಸಾವಿರ ಸಸಿಗಳನ್ನು ಉತ್ಪಾದಿಸಲಾಗಿದ್ದರೆ, ಈ ಬಾರಿ 52 ಸಾವಿರ ಸಸಿಗಳ ಉತ್ಪಾದನೆ ಮಾತ್ರ ಸಾಧ್ಯವಾಗಿದೆ.
ರೈತರ ಅರಣ್ಯ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಹಾಗನಿ, ಸೀತಾಫಲ, ಸಾಗವಾನಿ, ಖಾಜು, ಬೀದಿರು ಹಾಗೂ ಹೆಬ್ಬೇವು ಸೇರಿದಂತೆ ಹಲವು ಜಾತಿಯ ಸುಮಾರು 30 ಸಾವಿರ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಸಿದ್ಧತೆ ಮಾಡಲಾಗಿದೆ. ಕೇವಲ 3 ರೂ. ಗಳಿಂದ 6 ರೂ. ಗಳ ದರದಲ್ಲಿ ಸಸಿಗಳನ್ನು ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಡಗಂಚಿ ಹಾಗೂ ಕೊರಳ್ಳಿ ನರ್ಸರಿಗಳಲ್ಲಿ ಮುಂಗಾರು ಹಂಗಾಮಿಗಾಗಿ ಸಸಿ ಉತ್ಪಾದನೆ ಭರದಿಂದ ಸಾಗುತ್ತಿದ್ದು, ಈಗಾಗಲೇ ಸಾವಿರಾರು ಸಸಿಗಳು ವಿತರಣೆಗೆ ಸಿದ್ಧವಾಗಿವೆ ಎಂದು ಆರ್ಎಫ್ಒ ಶಾಂತರೆಡ್ಡಿ ತಿಳಿಸಿದ್ದಾರೆ.
ಇನ್ನೊಂದೆಡೆ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಶಾಲೆಗಳು, ಕಾಲೇಜುಗಳು, ಸಂಘ-ಸಂಸ್ಥೆಗಳು, ರಸ್ತೆ ಬದಿಗಳು ಹಾಗೂ ಸರ್ಕಾರಿ ಜಮೀನುಗಳಲ್ಲಿ ನೆಡುತೋಪ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ.
ಬಬಲೇಶ್ವರ ಹಾಗೂ ಕೊರಳ್ಳಿ ಸಂರಕ್ಷಣಾ ಕೇಂದ್ರಗಳಲ್ಲಿ ಸುಮಾರು 23 ಸಾವಿರ ಸಸಿಗಳನ್ನು ಉತ್ಪಾದಿಸಲಾಗಿದ್ದು, 41 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಸಿರು ಅಭಿವೃದ್ಧಿ ಗುರಿ ಹೊಂದಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚುವರಿಯಾಗಿ 9 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳುವ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ.
ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದಲೂ ಸುಮಾರು 7 ಸಾವಿರ ಸಸಿಗಳನ್ನು ಕೇವಲ 6 ರೂ. ಗಳ ದರದಲ್ಲಿ ರೈತರಿಗೆ ವಿತರಿಸಲು ಸಿದ್ಧತೆ ಮಾಡಲಾಗಿದೆ. ಪರಿಸರ ಸಂರಕ್ಷಣೆ ಹಾಗೂ ಭವಿಷ್ಯದ ಹಸಿರು ವಾತಾವರಣಕ್ಕಾಗಿ ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡುವ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಸಾಮಾಜಿಕ ಅರಣ್ಯ ವಲಯಾಧಿಕಾರಿ ವೀರೇಂದ್ರ ಸಿ.ವೈ ಮನವಿ ಮಾಡಿದ್ದಾರೆ.






