Aland | ಗಡಿಭಾಗದಲ್ಲಿ ಜಾನುವಾರು ಕಳ್ಳರ ಹಾವಳಿ; ರೈತರಲ್ಲಿ ಆತಂಕ

ಆಳಂದ: ಗಡಿಭಾಗದ ತೊಡೋಳ ಹಾಗೂ ಖಂಡಾಳ ಗ್ರಾಮಗಳಲ್ಲಿ ಜಾನುವಾರು ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ. ಕಳೆದ ಕೆಲ ದಿನಗಳಿಂದ ನಡೆದ ಸರಣಿ ಕಳ್ಳತನಗಳಿಂದ ಗ್ರಾಮೀಣ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಶನಿವಾರ ಹಾಗೂ ಭಾನುವಾರ ಮಧ್ಯರಾತ್ರಿ ಖಂಡಾಳ ಗ್ರಾಮದ ರೈತ ಸಿದ್ದಪ್ಪ ಭೀಮಶ್ಯಾ ಗುರವ್ ಅವರ ಮನೆ ಮುಂಭಾಗದಲ್ಲಿ ಕಟ್ಟಿದ್ದ ಮೂರು ಹಸುಗಳನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಇದೇ ವೇಳೆ ತೊಡೋಳ ಗ್ರಾಮದ ರೈತ ವಿಜಯ ಅವರಿಗೆ ಸೇರಿದ ಎರಡು ಎತ್ತುಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಇದಕ್ಕೂ ಮುನ್ನ ತೊಡೋಳ ಗ್ರಾಮದಲ್ಲಿಯೇ ಎರಡು ಎಮ್ಮೆಗಳನ್ನು ಕಳ್ಳತನ ಮಾಡಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಾತ್ರಿ ವೇಳೆ ವಾಹನಗಳಲ್ಲಿ ಜಾನುವಾರುಗಳನ್ನು ತುಂಬಿಕೊಂಡು ಕಳ್ಳರು ಪರಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಸಂಘಟಿತ ಜಾನುವಾರು ಕಳ್ಳರ ಜಾಲ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ.
ಮಳೆ ಕೊರತೆ, ಬಿತ್ತನೆ ವಿಳಂಬ ಹಾಗೂ ಬೆಳೆ ನಷ್ಟದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಜಾನುವಾರು ಕಳ್ಳತನ ಮತ್ತೊಂದು ಆರ್ಥಿಕ ಹೊಡೆತ ನೀಡಿದೆ. ಕೃಷಿ ಚಟುವಟಿಕೆಗಳಿಗೆ ಆಧಾರವಾಗಿರುವ ಜಾನುವಾರುಗಳನ್ನು ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಗಡಿಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಜಾನುವಾರು ಕಳೆದುಕೊಂಡ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ತೊಡೋಳ ಗ್ರಾಮದ ರೈತ ವಿಶ್ವನಾಥ್ ಪಾಟೀಲ್ ಹಾಗೂ ಖಂಡಾಳ ಗ್ರಾಮದ ಗುರುನಾಥ್ ಬಿರಾಜ್ದಾರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ರೈತರು ಆಳಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






