Aland | ಜೆಡಿಎಸ್ಗೆ ರಫೀಕ್ ಇನಾಮದಾರ ಸೇರ್ಪಡೆ

ಆಳಂದ: ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ನಾಂದಿ ಹಾಡುವ ಬೆಳವಣಿಗೆಯೊಂದರಲ್ಲಿ ಪ್ರಭಾವಿ ಮುಖಂಡ ರಫೀಕ್ ಇನಾಮದಾರ ಅವರು ಅಧಿಕೃತವಾಗಿ ಜನತಾ ದಳ (ಜಾತ್ಯತೀತ) ಪಕ್ಷಕ್ಕೆ ಸೇರ್ಪಡೆಯಾದರು.
ಇದುವರೆಗೆ ಪುರಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ವಿವಿಧ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತ ರಾಜಕೀಯ ಪ್ರಭಾವ ಉಳಿಸಿಕೊಂಡಿದ್ದ ಇನಾಮದಾರ, ಇದೀಗ ಜೆಡಿಎಸ್ ಧ್ವಜದಡಿ ತಮ್ಮ ರಾಜಕೀಯ ಪಯಣ ಆರಂಭಿಸಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣದಲ್ಲಿರುವ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ಶಾಲು ಹೊದಿಸಿ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಸೇರ್ಪಡೆ ಬಳಿಕ ಮಾತನಾಡಿದ ರಫೀಕ್ ಇನಾಮದಾರ, ರೈತಪರ, ಬಡಜನಪರ ಹಾಗೂ ಸಾಮಾಜಿಕ ನ್ಯಾಯದ ತತ್ವ-ಸಿದ್ಧಾಂತಗಳಿಂದ ಆಕರ್ಷಿತರಾಗಿ ಜೆಡಿಎಸ್ ಸೇರಿರುವುದಾಗಿ ತಿಳಿಸಿದರು. ಅಧಿಕಾರಕ್ಕಾಗಿ ಅಲ್ಲ, ಜನರ ಧ್ವನಿಯಾಗಿ ಕೆಲಸ ಮಾಡಲು ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆಳಂದ ಕ್ಷೇತ್ರದಲ್ಲಿ ರೈತರು, ಯುವಕರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ 2028ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಗ್ರಾಮಮಟ್ಟದಿಂದ ಪಕ್ಷವನ್ನು ಸಂಘಟಿಸುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ, ರೈತರಿಗೆ ಶಾಶ್ವತ ಪರಿಹಾರ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನಪರ ಆಡಳಿತಕ್ಕಾಗಿ ಜೆಡಿಎಸ್ ಬಲಿಷ್ಠ ಪರ್ಯಾಯವಾಗಿ ಬೆಳೆಯಬೇಕಿದೆ. ಮಹೇಶ್ವರಿ ವಾಲಿ ಅವರ ನಾಯಕತ್ವದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಸಂಪೂರ್ಣ ಶಕ್ತಿಯಿಂದ ಕೆಲಸ ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಮಾತನಾಡಿ, ಆಳಂದ ಕ್ಷೇತ್ರದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಜೆಡಿಎಸ್ ವೇಗವಾಗಿ ಬೆಳೆಯುತ್ತಿದ್ದು, ಜನಪರ ಚಿಂತನೆ ಹೊಂದಿರುವ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂಘಟನೆಗೆ ಹೊಸ ಬಲ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀಮನಗರದ ಯುವ ಕಾರ್ಯಕರ್ತ ಸೂರ್ಯಕಾಂತ ಬಿ. ಚಿಟಕೋಟಿ ಸಹ ಜೆಡಿಎಸ್ಗೆ ಸೇರ್ಪಡೆಯಾಗಿದ್ದು, ಅವರನ್ನು ಕೂಡ ಪಕ್ಷದ ಶಾಲು ಹೊದಿಸಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಸೈಯದ್ ಜಾಕೀರ್ ಅಹ್ಮದ್, ಶಿವುಕುಮಾರ ಪಡಸಾವಳಿ, ವಿಕ್ರಂ ಅಷ್ಟಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






