ಆಳಂದ| ಕಳಪೆ ಸೋಯಾಬಿನ್ ಬೀಜ ವಿತರಣೆ ಆರೋಪ: ಪರಿಹಾರಕ್ಕೆ ರೈತರಿಂದ ಒತ್ತಾಯ

ಕಲಬುರಗಿ: ಆಳಂದ ತಾಲೂಕಿನಲ್ಲಿ ಆಳಂದ ರೈತ ಸಂಪರ್ಕ ಕಚೇರಿಯಿಂದ ಪಡೆದು ಬಿತ್ತನೆಗೆ ಬಳಸಿದ ಸೋಯಾಬಿನ್ ಬೀಜಗಳು ಮೊಳಕೆ ಒಡೆಯದಿರುವ ಹಿನ್ನೆಲೆಯಲ್ಲಿ ಕಳಪೆ ಬೀಜ ವಿತರಿಸಿದ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತರು ತಾಲೂಕಿನ ಮಂಗಳವಾರ ಆಳಂದ ರೈತ ಸಂಪರ್ಕ ಕೇಂದ್ರ ಹಾಗೂ ತಹಶೀಲ್ದಾರ್ ಕಚೇರಿ ಎದುರು ಮಿಂಚಿನ ಪ್ರತಿಭಟನೆ ನಡೆಸಿದರು.
500ರಕ್ಕೂ ಹೆಚ್ಚು ರೈತರು ಕಳಪೆ ಬೀಜದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ನಾಟಿಯಾಗದೇ ನಷ್ಟ ಅನುಭವಿಸಿದ್ದು, ಆಡಳಿತ ವ್ಯವಸ್ಥೆಯನ್ನು ನಾಚಿಸುವಂತೆ ಮಾಡಿದೆ. ಇಂಥ ಕಳಪೆ ಬೀಜ ವಿತರಿಸಿದ ಕಂಪನಿಯ ವಿರುದ್ಧ ಹಾಗೂ ಸಂಬಂಧಿತ ಅಧಿಕಾರಿಗಳನ್ನೇ ಹೊಣೆಯನ್ನಾಗಿಸಿ ಕ್ರಮ ಜರುಗಿಸಿ, ರೈತರಿಗೆ ಪರಿಹಾರ ಕೊಡಬೇಕು ಎಂದು ಸಂತ್ರಸ್ತ ರೈತರು ಆಗ್ರಹಿಸಿದರು.
ಪ್ರತಿಭಟನೆಗೆ ಬೆಂಬಲಿಸಿ ಭಾಗವಹಿಸಿದ್ದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ರೈತರಾದ ದಯಾನಂದ ಪಾಟೀಲ, ಸಂದೇಶ ಜವಳಿ, ಹನುಮಂತರಾವ್ ಪಾಟೀಲ್, ಪಿಎಲ್ಡಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಬಸವರಾಜ್ ಪಾಟೀಲ್ ಬೆಳಮಗಿ, ಹಣಮಂತರಾವ್ ಮಾಲಾಜಿ, ನವ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಬಸವಲಿಂಗಪ್ಪ ಆರ್. ಮುದ್ದಾಣಿ, ಖಜೂರಿಯ ವಿಜಯಕುಮಾರ್ ತಡಕಲ್, ಪ್ರಾಚಾರ್ಯ ಮಲ್ಲಿಕಾರ್ಜುನ್ ಪೂಜಾರಿ ಸೇರಿದಂತೆ ಅರವಿಂದ ವಲಯದ ರೈತರು ಭಾಗವಹಿಸಿ, ಸರ್ಕಾರ ಮತ್ತು ಕಂಪನಿಯ ವಿರುದ್ಧ ಆಕ್ರೋಶ ಹೊರಹಾಕಿದರು.
ವಿಜ್ಞಾನಿಗಳ ಪರಿಶೀಲನೆ ವರದಿ ಬಳಿಕ ಕ್ರಮ:
ರೈತ ಸಂಪರ್ಕ ಕೇಂದ್ರದ ಮೂಲಕ ಸರಾಸ್ ಆಗ್ರೋ ಏಜೆನ್ಸಿಯಿಂದ ವಿತರಿಸಲಾದ ಜೆಎಸ್-335 ಸೋಯಾಬಿನ್ ಬೀಜ ಕಳಪೆ ಗುಣಮಟ್ಟದ್ದಾಗಿರುವ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಒಟ್ಟು 152 ರೈತರಿಗೆ 133 ಕ್ವಿಂಟಲ್ ಬೀಜ ವಿತರಿಸಲಾಗಿದ್ದು, ನರೋಣದಲ್ಲಿ 150 ಕ್ವಿಂಟಲ್ ಬೀಜ ವಿತರಣೆಯಾಗಿತ್ತು. ಆದರೆ, 43 ರೈತರು ಬೀಜದ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ವಾಪಸ್ ಕೊಟ್ಟಿದ್ದಾರೆ. ತಂಬಾಕುವಾಡಿಯಲ್ಲಿ ಒಬ್ಬ ರೈತ ನಾಲ್ಕು ಬ್ಯಾಗ್ಗಳಲ್ಲಿ ಎರಡು ಬ್ಯಾಗ್ ಬೀಜವನ್ನು ವಾಪಸ್ ಕೊಟ್ಟಿದ್ದಾನೆ. ಈ ವಿಷಯದ ಕುರಿತು ವಿಜ್ಞಾನಿಗಳ ತಂಡವು ಈಗಾಗಲೇ ಭೇಟಿ ನೀಡಿ, ಬೀಜ ಹಾಗೂ ಬಿತ್ತನೆಯ ಸ್ಥಳವನ್ನು ಪರಿಶೀಲಿಸಿದೆ. ವಿಜ್ಞಾನಿಗಳ ಪರಿಶೀಲನೆಯ ವರದಿಯನ್ನು ಬಂದ ತಕ್ಷಣ ಮೇಲಾಧಿಕಾರಿಗಳಿಗೆ ಸಲ್ಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕ ಬಿರಾದಾರ್ ಬನ್ಸಿದ್ದಪ್ಪ ಹೇಳಿದ್ದಾರೆ.







