ಆಳಂದ | ವಿದ್ಯುತ್ ಟ್ರಾನ್ಸ್ ಫಾರ್ಮರ್ ತಗುಲಿ ಆಕಳು ಸಾವು

ಕಲಬುರಗಿ : ಆಳಂದ ಪಟ್ಟಣದ ಹನುಮಾನ್ ದೇವಸ್ಥಾನ ಬಳಿಯ ಡಿಗ್ರಿ ಕಾಲೇಜ್ ಮಾರ್ಗದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ನ ವಿದ್ಯುತ್ ತಗುಲಿ ಆಕಳೊಂದು ಸಾವನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಆಳಂದ ಪಟ್ಟಣದ ಹತ್ಯಾನಗಲ್ಲಿಯ ನಿವಾಸಿ ರೇವಣಸಿದ್ದಪ್ಪ ಎಂಬುವರಿಗೆ ಸೇರಿದ ಆಕಳು ಹೊಲಕ್ಕೆ ಹೋಗುವ ವೇಳೆ ಈ ಘಟನೆ ಸಂಭವಿಸಿದೆ.
ಮುಖ್ಯವಾದ ರಸ್ತೆಯ ಪಕ್ಕದಲ್ಲೇ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಯಾವುದೇ ಸುರಕ್ಷತೆ ಇಲ್ಲದಿರುವುದು ಆಕಳ ಸಾವಿಗೆ ಕಾರಣವಾಗಿದೆ. ಸಾರ್ವಜನಿಕರ ಓಡಾಟ ಹಾಗೂ ಮಕ್ಕಳ ಆಟವಾಡುವ ಸ್ಥಳದಲ್ಲಿ ಟ್ರಾನ್ಸ್ ಫಾರ್ಮರ್ ಗೆ ಸುರಕ್ಷತೆ ಕಲ್ಪಿಸದೇ ಇರುವುದು ಯಾವುದೇ ಸಂದರ್ಭದಲ್ಲೂ ಜೀವಹಾನಿಯಾಗುವ ಸಾಧ್ಯತೆ ಇದೇ ಮುಂಜಾಗೃತ ಕ್ರಮ ಅನುಸರಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪಶುವೈದ್ಯ ಜಗನಾಥ ಕುಂಬಾರ, ಜೆಸ್ಕಾಂ ಸಿಬ್ಬಂದಿ, ಪುರಸಭೆ ಸದಸ್ಯ ಶ್ರೀಶೈಲ್ ಪಾಟೀಲ್, ಹಿರಿಯ ಮುಖಂಡ ಸಂದೇಶ್ ಜವಳಿ ಹಾಗೂ ರೈತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರಾನ್ಸ್ ಫಾರ್ಮರ್ ನಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸದಿರುವುದು ಆಕಳು ಸಾವಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಜೆಸ್ಕಾಂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜೀವಹಾನಿ ತಡೆಯಬೇಕೆಂದು ಸ್ಥಳೀಯ ರೈತರು ಮತ್ತು ನಾಗರಿಕರು ಅಧಿಕಾರಿಗಳಲ್ಲಿ ಒತ್ತಾಯಿಸಿ ಆಕಳು ಸಾವಿನಿಂದಾಗಿ ಹಾನಿಯಾದ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.







