ಆಳಂದ | ಕನ್ನಡದ ಬಗ್ಗೆ ಉದಾಸೀನತೆ ಬೇಡ, ಅಭಿಮಾನ ಇರಲಿ : ಧರ್ಮಣ್ಣ ಧನ್ನಿ

ಕಲಬುರಗಿ : ನಮ್ಮ ನಾಡು ನುಡಿಗಳ ಬಗ್ಗೆ ಉದಾಸೀನತೆ ತೋರದೆ ಪ್ರೀತಿ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಮೌಂಟ್ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೆಲ ಜಲ, ಭಾಷೆ ಸಂಸ್ಕೃತಿಯನ್ನು ಗೌರವಿಸುವ ಮೂಲಕ ಅವುಗಳ ರಕ್ಷಣೆಗೆ ನಾವೆಲ್ಲ ಕನ್ನಡದ ಅಸ್ಮೀತೆ ಮೆರೆಯಬೇಕು. ಜೊತೆಗೆ ಅನ್ಯ ಭಾಷೆ ಪ್ರೀತಿಸಿ ನಮ್ಮ ಮಾತೃ ಭಾಷೆಯನ್ನು ಹೃದಯ ಭಾಷೆ ಮತ್ತು ಅನ್ನದ ಭಾಷೆಯನ್ನಾಗಿ ಕಾಣಬೇಕಾಗಿದೆ. ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯಲು ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಲು ಪಾಲಕರು ಮುಂದಾಗಬೇಕು. ಮಕ್ಕಳಲ್ಲಿ ಉತ್ತಮ ಹವ್ಯಾಸ ಮೂಡಿಸಬೇಕು ಎಂದರು.
ಮುಖ್ಯ ಅತಿಥಿ ಸಮನ್ವಿತಾ ಜಿ.ಮಠ ಮಾತನಾಡಿ, ಮಕ್ಕಳಲ್ಲಿ ಕನ್ನಡ ಭಾಷೆ ಪ್ರತಿದಿನ ಬಳಸುವುದರಿಂದ ಸೊಗಡು ಇನ್ನಷ್ಟು ಹೆಚ್ಚುತ್ತದೆ. ಇಂದು ನಗರ ಪ್ರದೇಶಗಳಲ್ಲಿ ಕನ್ನಡ ಸೊರುಗುತ್ತಿದ್ದು, ಕನ್ನಡ ಕಟ್ಟಿ ಬೆಳೆಸುವ ಕಾರ್ಯ ಎಲ್ಲರು ಸೇರಿ ಮಾಡಬೇಕಾಗಿದೆ. ಮಕ್ಕಳಲ್ಲಿ ಮಾತೃ ಹೃದಯ ಇಂದು ಕಾಣಬೇಕಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ದೀಪಕ ಥಾಮಸ್ ಅವರು ಅಧ್ಯಕ್ಷತೆ ವಹಿಸಿ, ಸಂಸ್ಥೆಯಡಿ ಓದುತ್ತಿರುವ ಸಾವಿರಾರು ಮಕ್ಕಳಿಗೆ ಕನ್ನಡ ಪ್ರೀತಿ ಮತ್ತು ಅಭಿಮಾನ ಮೂಡಿಸುವ ಅನೇಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಕೂಡ ಹಮ್ಮಿಕೊಂಡು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕನ್ನಡವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಅದರ ಹಿರಿಮೆಯನ್ನು ಮಕ್ಕಳಿಗೆ ತಿಳಿಸಿ ಹೇಳಬೇಕಾಗದೆ ಎಂದರು.
ಪ್ರೀನ್ಸಿಪಾಲ್ ಸಂದೀಪ್ ಹಾಗು ಫಾದರ್ ಪ್ಲೇಮಿಂಗ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ನಂತರ ರಾಜ್ಯೋತ್ಸವ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.







