ಆಳಂದ | ಕಾಡು ಜಿಂಕೆಗಳ ಹಾವಳಿಯಿಂದ ರೈತರ ಅಪಾರ ಬೆಳೆ ನಷ್ಟ
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಅರಣ್ಯ ಇಲಾಖೆಗೆ ರೈತರಿಂದ ಮನವಿ

ಕಲಬುರಗಿ: ಆಳಂದ ತಾಲೂಕಿನ ಗಡಿ ಭಾಗದ ಖಜೂರಿ ಸೇರಿದಂತೆ ಕಣಮಸ್-ಕೋತನ ಹಿಪ್ಪರ್ಗಾ ಮಾರ್ಗದ ಮಧ್ಯದಲ್ಲಿ ಮಂಗಳವಾರ ಕಾಡು ಜಿಂಕೆಗಳ ಹಿಂಡೊಂದು ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾನಿಗೊಳಿಸಿದ್ದು, ರೈತರಿಗೆ ತೀವ್ರ ನಷ್ಟವನ್ನುಂಟು ಮಾಡಿದೆ ಎಂದು ರೈತರು ಹೇಳಿಕೊಂಡಿದ್ದಾರೆ.
ಕಾಡು ಪ್ರಾಣಿಗಳಿಗೆ ಆಹಾರ, ನೀರು ಮತ್ತು ಅನುಕೂಲಕರ ವಾತಾವರಣದ ಕೊರತೆಯಿಂದಾಗಿ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ವರ್ಷವಿಡೀ ದುಡಿಯುವ ರೈತರು ಈಗಾಗಲೇ ರೋಗ, ನೆರೆ, ಬರಗಾಲ ಮತ್ತು ಕಾಡು ಪ್ರಾಣಿಗಳ ಕಾಟದಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ಕಾಡು ಜಿಂಕೆಗಳ ಹಾವಳಿಯಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ಧಾರೆ. ರೈತರು ಮತ್ತು ಸ್ಥಳೀಯರು ಸಂಬಂಧಪಟ್ಟ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಖಾಲಿ ಗುಡ್ಡಗಳಲ್ಲಿ ಹುಲ್ಲುಗಾವಲು, ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಕಾಡು ಪ್ರಾಣಿಗಳಿಗೆ ಪರ್ಯಾಯ ಆಹಾರ ಮತ್ತು ಆವಾಸಸ್ಥಾನವನ್ನು ಒದಗಿಸಿದರೆ, ಪ್ರಾಣಿಗಳನ್ನು ಸಂರಕ್ಷಿಸುವುದರ ಜೊತೆಗೆ ರೈತರ ಬೆಳೆಗಳನ್ನೂ ಉಳಿಸಬಹುದು ಎಂದು ಪರಿಸರ ಪ್ರೇಮಿಗಳು ಸಲಹೆ ನೀಡಿದ್ದಾರೆ.
ಒಣ ಪ್ರದೇಶವಾಗಿರುವ ಆಳಂದ್ ತಾಲೂಕು ಮತ್ತು ಕಲಬುರಗಿ ಜಿಲ್ಲೆಯಲ್ಲಿ ಹಸಿರು ಹಾಸಿದರೆ, ಪರಿಸರ ಸಮತೋಲನದ ಜೊತೆಗೆ ರೈತರಿಗೆ ಸಮೃದ್ಧತೆ ದೊರೆಯುವ ಸಾಧ್ಯತೆಯಿದೆ. ಅರಣ್ಯ ಇಲಾಖೆ ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.







