ಆಳಂದ | ಪತ್ರಿಕೋದ್ಯಮಕ್ಕೆ ಮಾರ್ಕೆಟಿಂಗ್ ತಂತ್ರಗಳ ಜ್ಞಾನ ಅನಿವಾರ್ಯ : ಡಾ.ಶ್ರೀನಿವಾಸನ್ ಸುಬ್ರಮಣಿಯನ್

ಇಂದಿನ ಸ್ಪರ್ಧಾತ್ಮಕ ಮಾಧ್ಯಮ ಯುಗದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೇವಲ ಸುದ್ದಿ ಬರವಣಿಗೆಯಲ್ಲೇ ಸೀಮಿತರಾಗದೆ, ಮಾರ್ಕೆಟಿಂಗ್ ತಂತ್ರಗಳು, ಟಿವಿ ಮಾಧ್ಯಮದ ಕಾರ್ಯವೈಖರಿ ಹಾಗೂ ಚಲನಚಿತ್ರ ಮಾರುಕಟ್ಟೆಯ ಪ್ರವೃತ್ತಿಗಳ ಕುರಿತು ಸಮಗ್ರ ಜ್ಞಾನ ಹೊಂದಿರಬೇಕು ಎಂದು ಡಾ. ಶ್ರೀನಿವಾಸನ್ ಸುಬ್ರಮಣಿಯನ್ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ (ಸಿಯುಕೆ) ಆಯೋಜಿಸಿದ್ದ “ದಕ್ಷಿಣ ಭಾರತದಲ್ಲಿ ಟಿವಿ ಮಾಧ್ಯಮ ಮತ್ತು ಚಲನಚಿತ್ರ ಮಾರುಕಟ್ಟೆಯ ಪ್ರವೃತ್ತಿಗಳು ಮತ್ತು ತಂತ್ರಗಳು” ಎಂಬ ವಿಷಯದ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಡಿಜಿಟಲ್ ಯುಗದಲ್ಲಿ ಮಾಧ್ಯಮ ಕ್ಷೇತ್ರ ವೇಗವಾಗಿ ಬದಲಾಗುತ್ತಿದ್ದು, ಪ್ರೇಕ್ಷಕರ ಆಸಕ್ತಿಗಳೂ ಕಾಲಾನುಗತಿಯಾಗಿ ರೂಪಾಂತರಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾರುಕಟ್ಟೆ ವಿಧಾನಗಳು, ಪ್ರೇಕ್ಷಕರ ಮನೋಭಾವ, ಕಂಟೆಂಟ್ ಪ್ರಸ್ತುತೀಕರಣ ಹಾಗೂ ಪ್ರಚಾರ ತಂತ್ರಗಳ ಕುರಿತು ಅರಿವು ಹೊಂದುವುದು ಅಗತ್ಯವೆಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಧ್ಯಮ ನಿರ್ವಹಣೆ ಹಾಗೂ ಮಾರ್ಕೆಟಿಂಗ್ ತಂತ್ರಗಳಲ್ಲಿ ಪರಿಣತಿ ಗಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾನೂನು ನಿಕಾಯದ ಪ್ರೊ. ಬಸವರಾಜ್ ಕುಬಕಡ್ಡಿ, ಪತ್ರಿಕೋದ್ಯಮ ನಿಕಾಯದ ಮುಖ್ಯಸ್ಥೆ ಡಾ. ಶಾಮಲಾ ರಾಮಪ್ಪ, ತರಬೇತುದಾರ ಡಾ. ಶ್ರೀನಿವಾಸನ್ ಸುಬ್ರಮಣಿ ಉಪಸ್ಥಿತರಿದ್ದರು. ಡಾ. ಒಯಿನಮ್ ಬೇದಜಿತ್ ಸ್ವಾಗತಿಸಿದರು. ಡಾ. ಕಾರ್ತಿಕ್ ಅತಿಥಿ ಪರಿಚಯ ಮಾಡಿದರು. ಡಾ. ದೀಪ್ತಿ ವಂದಿಸಿದರು. ವಿದ್ಯಾರ್ಥಿನಿ ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು.






