ಆಳಂದ | ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಯ ಅಭಿಯಾನಕ್ಕೆ ಚಾಲನೆ

ಕಲಬುರಗಿ: ದೇಶದಾದ್ಯಂತ ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗಾಗಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಈಗ ಆಳಂದ ತಾಲೂಕಿಗೂ ತಲುಪಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಬುಧವಾರ ಆಳಂದ ತಾಲ್ಲೂಕು ಆಡಳಿತಸೌಧ ಸಭಾಂಗಣದಲ್ಲಿ ಆದಿ ಕರ್ಮಯೋಗಿ ಅಡಿಯಲ್ಲಿ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರು, “ದೇಶದ 30 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, 550 ಜಿಲ್ಲೆಗಳು ಮತ್ತು ಒಂದು ಲಕ್ಷ ಗ್ರಾಮಗಳನ್ನು ಒಳಗೊಂಡಿರುವ ಈ ಅಭಿಯಾನವು ಬುಡಕಟ್ಟು ಸಮುದಾಯಗಳ ಬದುಕುಮಟ್ಟ ಸುಧಾರಿಸಲು ಸರ್ಕಾರ ಕೈಗೊಂಡಿರುವ ಅತ್ಯಂತ ದೊಡ್ಡ ಹೆಜ್ಜೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಡೆದ ತರಬೇತಿಯನ್ನು ಗ್ರಾಮೀಣ ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಬಳಸಬೇಕು” ಎಂದು ಹೇಳಿದರು.
ಅವರು ಮುಂದುವರೆದು, ಈ ಅಭಿಯಾನವು ಕೇವಲ ಯೋಜನೆಗಳ ಪಟ್ಟಿ ನೀಡುವುದಲ್ಲದೆ, ಅವುಗಳನ್ನು ಜನಜಾತಿ ಸಮುದಾಯಗಳ ನಿಜವಾದ ಅಗತ್ಯಗಳಿಗೆ ಹೊಂದುವಂತೆ ಜಾರಿಗೊಳಿಸುವುದೇ ಉದ್ದೇಶ ಎಂದು ಸ್ಪಷ್ಟಪಡಿಸಿದರು. “ಜನಜಾತಿ ಸಮುದಾಯಗಳು ಶಿಕ್ಷಣ, ಆರೋಗ್ಯ, ಉದ್ಯೋಗ, ಪಶುಪಾಲನೆ, ಮಹಿಳಾ ಸಬಲೀಕರಣ ಇತ್ಯಾದಿ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಶಾಶ್ವತ ಪರಿಹಾರ ನೀಡುವುದು ನಮ್ಮ ಹೊಣೆ” ಎಂದರು.
ಕಾರ್ಯಾಗಾರದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಹೋಳ್ಕರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿoಗ ಹಿರೇಮಠ, ಪಶು ಸಂಗೋಪನ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪಾ ಇಂಗಳೆ ಮುಂತಾದವರು ಉದ್ದೇಶಿಸಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಸಂತೋಷ್ ಶಿಂಧೆ, ಸಿಡಿಪಿಒ ಕಚೇರಿ ಹಿರಿಯ ಮೇಲ್ವಿಚಾರಕಿ ಬೇಬಿನಂದಾ ಎಸ್. ಪಾಟೀಲ್, ಬಿಆರ್ಸಿ ಮಲ್ಲಿನಾಥ್ ಘೋಡಕೆ, ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ನಂದಿಕೋಲಮಠ, ತಾಪಂ ಯೋಜನಾಧಿಕಾರಿ ಸೋಮಶೇಖರ್ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಸಿದ್ಧರಾಮ ಪಿ. ವಡಗಾಂವ, ವಾರ್ಡ್ನ ನಿಂಗಣ್ಣಾ ದೊಡ್ಡಮನಿ, ಅಶ್ವಿನಿ, ಸುವರ್ಣ, ಎಫ್ಡಿಎ ರಮೇಶ ಪಾತ್ರೆ, ಇಂದುಬಾಯಿ, ಪಾರ್ವತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡರು.







