ಆಳಂದ | ಲೋಕಾಯುಕ್ತ ತಂಡದಿಂದ ಹಲವು ಕಚೇರಿಗಳಿಗೆ ದಿಢೀರ್ ದಾಳಿ

ಆಳಂದ: ಭ್ರಷ್ಟಾಚಾರ, ಆಡಳಿತ ಲೋಪದೋಷಗಳು ಹಾಗೂ ಸಾರ್ವಜನಿಕ ಸೇವೆಗಳಲ್ಲಿನ ವಿಳಂಬದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಲೋಕಾಯುಕ್ತರ ತಂಡವು ಶನಿವಾರ ಆಳಂದ ಸೇರಿದಂತೆ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮಿಂಚಿನ ಕಾರ್ಯಾಚರಣೆ ನಡೆಸಿ ಆಡಳಿತ ವ್ಯವಸ್ಥೆಗೆ ಬಿಸಿಮುಟ್ಟಿಸುವಂತ ಎಚ್ಚರಿಕೆ ನೀಡಿದೆ.
ಲೋಕಾಯುಕ್ತ ನ್ಯಾಯಾಧೀಶ ವಿಜಯನಂದ ಅವರ ನೇತೃತ್ವದಲ್ಲಿ, ರಾಜ್ಯ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ನ್ಯಾಯಾಧೀಶ ಶ್ರೀನಾಥ, ಲೋಕಾಯುಕ್ತ ಎಸ್ಪಿ ಸಿದ್ಧರಾಜ, ಡಿವೈಎಸ್ಪಿಗಳಾದ ಬಸವರಾಜ, ಪೋಟೆಬಾರೆಡ್ಡಿ, ವಸಂತ, ವಿಜಯ ಬಿರಾದಾರ, ಬಿ.ಎಸ್. ಪಾಟೀಲ ಹಾಗೂ ಇನ್ಸ್ಪೆಕ್ಟರ್ ಸಲಾಂ ಸೇರಿದಂತೆ ಅಧಿಕಾರಿಗಳ 8 ತಂಡಗಳು ಆಳಂದ ಪಟ್ಟಣದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದವು. ಸ್ಥಳೀಯವಾಗಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ತಂಡದೊಂದಿಗೆ ಇದ್ದರು. ನಾಲ್ಕು ಜಿಲ್ಲೆಗಳಲ್ಲೂ ಸುಮಾರು 150ಕ್ಕೂ ಅಧಿಕ ಅಧಿಕಾರಿಗಳನ್ನೊಳಗೊಂಡ ಹಲವು ತಂಡಗಳು ವಿವಿಧ ಸರ್ಕಾರಿ ಕಚೇರಿಗಳಿಗೆ ಹಠಾತ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದವು.
ಆರ್ಟಿಒ ಚೆಕ್ಪೋಸ್ಟ್ನಲ್ಲಿ ಅಕ್ರಮ ಹಣ ವಸೂಲಾತಿ :
ಆಳಂದದ ಆರ್ಟಿಒ ಚೆಕ್ಪೋಸ್ಟ್ಗೆ ಹಠಾತ್ ಭೇಟಿ ನೀಡಿದ ಲೋಕಾಯುಕ್ತರ ತಂಡ, ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿಸುತ್ತಿದ್ದ ಪ್ರಕರಣವನ್ನು ಸ್ವತಃ ಕಣ್ಣಾರೆ ಕಂಡು ಬೆಚ್ಚಿಬಿದ್ದಿತು. ಆರ್ಟಿಒ ಅಧಿಕಾರಿ ಇಕ್ರಂ ಪಾಷಾ ಲಂಚ ವಸೂಲಾತಿಯಲ್ಲಿ ತೊಡಗಿದ್ದರೆಂಬ ಆರೋಪದಡಿ ಈಗಾಗಲೇ ತನಿಖೆ ನಡೆಯುತ್ತಿರುವ ನಡುವೆಯೇ, ಅಕ್ರಮ ವಸೂಲಾತಿ ಮುಂದುವರಿದಿರುವುದು ಬೆಳಕಿಗೆ ಬಂದಿದೆ.
ಸಾರ್ವಜನಿಕ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ :
ಕಂದಾಯ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿದ ವೇಳೆ, ಖಾತಾ ಪೋಡಿ, ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿಸಿ ಜನರಿಗೆ ನ್ಯಾಯ ಒದಗಿಸಲಾಯಿತು. ಇದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.
ಅಧಿಕಾರಿ ಗೈರು : ನ್ಯಾಯಾಧೀಶರ ಆಕ್ರೋಶ :
ಬಿಸಿಎಂ ಇಲಾಖೆ ಪರಿಶೀಲನೆಯ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿ ಗೈರಾಗಿದ್ದ ಹಿನ್ನೆಲೆಯಲ್ಲಿ ಎಸ್ಡಿಸಿ ಸುನಿತಾ ರೆಡ್ಡಿ ಅವರು ಇಲಾಖೆಯ ಮಾಹಿತಿ ಒದಗಿಸಿದರು. ಶಿಕ್ಷಣ ಇಲಾಖೆಗೆ ಭೇಟಿ ನೀಡಿದಾಗ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ದಾಖಲೆಗಳನ್ನು ಸಲ್ಲಿಸಿದರು. ಭೂ ನೋಂದಣಿ, ಆಹಾರ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಕಡತಗಳನ್ನೂ ಲೋಕಾಯುಕ್ತರ ತಂಡ ಸೂಕ್ಷ್ಮವಾಗಿ ಪರಿಶೀಲಿಸಿತು.







