ಆಳಂದ ತಾಲೂಕಿನಾದ್ಯಂತ ಕಳಪೆ ಕಾಮಗಾರಿ ನಡೆಸಿ ಕೋಟ್ಯಂತರ ರೂ. ಹಣ ಲೂಟಿ: ಮಾಜಿ ಶಾಸಕ ಗುತ್ತೇದಾರ್ ಆರೋಪ

ಕಲಬುರಗಿ: "ಆಳಂದ ತಾಲೂಕಿನಾದ್ಯಂತ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಕಳಪೆ ಕೆಲಸ ಮಾಡಿ ಕೋಟ್ಯಂತರ ಹಣ ಲೂಟಿಗೈಯಲಾಗುತ್ತಿದೆ" ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ಶಾಸಕ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಹಾಗೂ ಅವರ ಹೆಸರಿನಲ್ಲಿ ಗುಮುಲ್ ಅಧ್ಯಕ್ಷ ಆರ್.ಕೆ.ಪಾಟೀಲ್ ಅವರು ಹಳ್ಳಿ ರಸ್ತೆಗಳು, ಕಾಲು ದಾರಿಗಳು, ಬಂಡಿ ದಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ಪಡೆದು ತಮ್ಮ ಸಂಸ್ಥೆಯಾದ ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಕೆಲಸಗಳು ಮಾಡಲಾಗುತ್ತಿದೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಆಳಂದ ಕ್ಷೇತ್ರದ ಅಭಿವೃದ್ಧಿಗಾಗಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ನಿಗಮದಿಂದ 12 ಕಾಮಗಾರಿಗಳಿಗೆ 866 ಲಕ್ಷ ರೂ. ಅನುದಾನ ನೀಡಿದ್ದಾರೆ, 80 ಲಕ್ಷ ರೂ. ಅನುದಾನದ ಕಾಮಗಾರಿಗಳಿಗೆ ಕೇವಲ 5 ಲಕ್ಷ ರೂ. ಹಣ ಖರ್ಚು ಮಾಡಿದ್ದಲ್ಲದೆ ತಮ್ಮ ಸಂಸ್ಥೆಯಿಂದಲೇ ಹಣ ಭರಿಸಿ ವೆಚ್ಚ ಮಾಡಲಾಗುತ್ತಿದೆ ಎಂದು ಪ್ರಚಾರ ಗಿಟ್ಟಿಸಿ, ಜನರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಶಿರಪುರ ಮಾದರಿ ಯೋಜನೆ ಮಾಡುವುದಾಗಿ ಅನುದಾನ ತರುವ ಆಳಂದ ಶಾಸಕರು ಕೇವಲ ಪ್ರಾರಂಭದ ಕಾಮಗಾರಿ ನಡೆಸಿ, ಅದಕ್ಕೆ ಬರುವ ಕೋಟ್ಯಂತರ ಅನುದಾನವನ್ನು ಲಪಟಾಯಿಸಿದ್ದಾರೆ. ಆಣೆಕಟ್ಟಿಗೆ ನೀರು ತುಂಬಿಸುವ ನೆಪದಲ್ಲಿ ಹಣ ಲೂಟಿ ಮಾಡಿದ್ದಾರೆ. ಆದರೆ ಈವರೆಗೆ ಒಂದೂ ಕೆರೆಗೆ ಒಂದು ಹನಿ ನೀರು ಸಹ ನಿಂತಿಲ್ಲ ಎಂದು ಹೇಳಿದರು.
ತಪ್ಪು ಮಾಹಿತಿ ನೀಡಿ ತಮ್ಮ ಪ್ರಚಾರ ಗಿಟ್ಟಿಸುವುದಲ್ಲದೆ ಸರಕಾರದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಕೂಡಲೇ ಶಾಸಕ ಹಾಗೂ ಆರ್.ಕೆ.ಪಾಟೀಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸುಭಾಷ್ ಗುತ್ತೇದಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಭೂಸನೂರ, ಗೌರಿ ಚಿಚಕೋಟಿ, ರಮೇಶ್ ಬಿರಾದಾರ, ಸಂತೋಷ್ ಹಾದಿಮನಿ, ಅಶೋಕ ಹತ್ತರಕಿ, ಪ್ರಶಾಂತ್ ಕಡಗಂಚಿ, ಅಪ್ಪಾರಾವ್, ಹಣಮಂತ ಶೇರಿ ಇದ್ದರು.






