ಆಳಂದ | ಭಾರತ್ ಬಂದ್ ಮುಷ್ಕರಕ್ಕೆ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಕಲಬುರಗಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಅಖಿಲ ಭಾರತ್ ಬಂದ್ ಮುಷ್ಕರಕ್ಕೆ ಬೆಂಬಲವಾಗಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಯುಟಿ) ಆಳಂದ ತಾಲ್ಲೂಕು ಘಟಕದ ಕಾರ್ಯಕರ್ತರು ಸೇರಿದಂತೆ ಇತರೆ ಸಂಘಟನೆಗಳ ಪದಾಧಿಕಾರಿಗಳು ಆಳಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.
18 ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ ನಡೆದ ಈ ಪ್ರತಿಭಟನೆಯಲ್ಲಿ ಕಾರ್ಮಿಕರ ಹಕ್ಕುಗಳ ರಕ್ಷಣೆ, ಕನಿಷ್ಠ ವೇತನ ಹೆಚ್ಚಳ, ಸಾರ್ವಜನಿಕ ವಲಯದ ಖಾಸಗೀಕರಣ ತಡೆ, ಮತ್ತು ಕಾರ್ಮಿಕ ಕಾನೂನುಗಳ ಸುಧಾರಣೆಯಂತಹ ಬೇಡಿಕೆಗೆ ಆಗ್ರಹಿಸಿದರು.
ಬಳಿಕ ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸುಮಾರು ಎರಡು ಘಂಟೆ ನಡೆದ ಪ್ರತಿಭಟನೆಯಿಂದ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಕ್ತವಾಗಿತ್ತು. ವಾಹನ ಸವಾರರು ಪರದಾಡಿದರು. ಪ್ರತಿಭಟನಕಾರರು ಸರ್ಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಟ್ಟು, ಕಾರ್ಮಿಕರ ಒಳಿತಿಗಾಗಿ ಕೆಲಸ ಮಾಡಬೇಕು," ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ DYFI ರಾಜಾಧ್ಯಕ್ಷೆ ಲವಿತ್ರ ವಸ್ತ್ರದ್, ಪ್ರವೋದ ಪಾಂಚಾಳ, ಸಲ್ಮಾನ್, SFIನ ಮೇಘಾ ಚಿಚಕೋಟಿ, ಅಂಗನವಾಡಿಯ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪುಷ್ಪಾವತಿ ಅಶೋಕ ಚಟ್ಟಿ, ರಾಜಮತಿ ಪಾಟೀಲ, ಸುಗಂಧಾ ಮಾವಿನಕರ, ಕರ್ನಾಟಕ ರಾಜ್ಯ ಗ್ರಾಪಂ.ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲು ಅಲ್ಲಾಪುರ, ಸದಸ್ಯ ಹಣಮಂತರಾಯ್ ಕೆ.ಮದಗುಣಕಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತ ಮತ್ತಿತರರು ಪಾಲ್ಗೊಂಡಿದ್ದರು.







