ಬ್ಯಾಕಲಾಗ್ ಹುದ್ದೆ ಭರ್ತಿ: ಸಾರಿಗೆ ಸಚಿವರಿಂದ 26 ಜನರಿಗೆ ನೇಮಕಾತಿ ಪತ್ರ ವಿತರಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 26 ಬ್ಯಾಕ್ ಲಾಗ್ ಹುದ್ದೆಗಳಿಗೆ ನೇಮಕಾತಿ ಆದೇಶ ಪತ್ರವನ್ನು ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮಂಗಳವಾರ ಬೆಂಗಳೂರಿನ ಕೆ.ಎಸ್.ಆರ್.ಟಿ.ಸಿ ಪ್ರಧಾನ ಕಚೇರಿಯಲ್ಲಿ ವಿತರಿಸಿದರು.
2017ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಪಂಗಡ ಮೀಸಲಾತಿಯ 36 ಹುದ್ದೆಗಳನ್ನು ಹಿಂಬಾಕಿ ಹುದ್ದೆಗಳೆಂದು ಗುರುತಿಸಲಾಗಿದ್ದು, ಅವುಗಳ ಪೈಕಿ 1 ಸಹಾಯಕ ಲೆಕ್ಕಿಗ, 8 ಕುಶಲಕರ್ಮಿ, 6 ಸಹಾಯಕ ಸಂಚಾರ ನಿರೀಕ್ಷಕ, 3 ತಾಂತ್ರಿಕ ಸಹಾಯಕ ಹಾಗೂ 7 ಕರಾಸಾ ಪೇದೆ ಸೇರಿ ಒಟ್ಟಾರೆ ಆಯ್ಕೆಗೊಂಡ 26 ಅಭ್ಯರ್ಥಿಗಳಿಗೆ ಈಗಾಗಲೆ ಕೌನ್ಸೆಲಿಂಗ್ ಮೂಲಕ ಕಾರ್ಯಸ್ಥಳ ನಿಯೋಜನೆ ಮಾಡಿದ್ದರಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಚಿವರು ನೇಮಕಾತಿ ಆದೇಶಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕಳೆದ ಒಂದೂವರೆ ವರ್ಷದಲ್ಲಿ ಕೆ.ಕೆ.ಅರ್.ಟಿ.ಸಿ. ನಿಗಮದಲ್ಲಿ 1,619 ಚಾಲಕ ಹಾಗೂ ಚಾಲಕ-ಕಂ-ನಿರ್ವಾಹಕರನ್ನು ನೇರ ನೇಮಕಾತಿ, 100 ಮೃತರಾವಲಂಬಿತರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಹಾಗೂ ಇದೀಗ 25 ಜನರನ್ನು ಬ್ಯಾಕಲಾಗ್ ಸೇರಿ ಒಟ್ಟು 1,745 ನೇಮಕಾತಿ ಮಾಡಲಾಗಿದೆ ಎಂದರು.
ಇನ್ನು ನಿಗಮದಲ್ಲಿ ಸಾರಿಗೆ ಸೌಲಭ್ಯ ಸುಧಾರಣೆ ನಿಟ್ಟಿನಲ್ಲಿ 1,014 ಹೊಸ ಬಿ.ಎಸ್-6 ಮಾದರಿಯ ಬಸ್ ಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ 123 ನಗರ ಸಾರಿಗೆ ಬಸ್ ಹಾಗೂ 56 ಪ್ರೀಮಿಯಂ ಬಸ್ ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







