ಬೀದರ್, ಮಂಗಳೂರಿನಲ್ಲಿ ಬ್ಯಾಂಕ್ ಹಣ ಕಳವು : ಕಲಬುರಗಿಯಲ್ಲೂ ಬಿಗ್ ಅಲರ್ಟ್

ಕಲಬುರಗಿ : ಬೀದರ್, ಮಂಗಳೂರಿನಲ್ಲಿ ಬ್ಯಾಂಕ್ ಹಣ ಕಳವು ಮಾಡಿದ ಪ್ರಕರಣಗಳ ಬೆನ್ನಲ್ಲೇ ನಗರದ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ ಅವರು, ನಗರದ ಎಲ್ಲಾ ಬ್ಯಾಂಕ್ ಗಳ ವ್ಯವಸ್ಥಾಪಕರು, ಕೋ-ಆಪರೇಟಿವ್ ಸೊಸೈಟಿಗಳ ವ್ಯವಸ್ಥಾಪಕರು ಮತ್ತು ವಿವಿಧ ಹಣಕಾಸು ಸಂಸ್ಥೆಗಳ ವ್ಯವಸ್ಥಾಪಕರ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಗಳ ಹಾಗೂ ಎ.ಟಿ.ಎಮ್ ಗಳ ಭದ್ರತೆಯ ದೃಷ್ಟಿಯಿಂದ ಬ್ಯಾಂಕ್ ಮತ್ತು ಎ.ಟಿ.ಎಮ್ ಗಳಲ್ಲಿ ಸಿಸಿ ಟಿವಿ ಕ್ಯಾಮರಾ ಹಾಗೂ ತರಬೇತಿ ಹೊಂದಿದ ಭದ್ರತಾ ಸಿಬ್ಬಂದಿ ಹಾಗೂ ಅಲಾರ್ಮ್, ಮೋಶನ್ ಡಿಟೆಕ್ಟರ್ಸ್ ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಮತ್ತು ಬ್ಯಾಂಕ್ ನಿಂದ ATM ಗಳಿಗೆ ಹಣವನ್ನು ಕಳುಹಿಸುವಾಗ ನುರಿತ ಭದ್ರತಾ ಸಿಬ್ಬಂದಿಯನ್ನು ಆಯುಧದೊಂದಿಗೆ ಕಡ್ಡಾಯವಾಗಿ ನೇಮಿಸಿ ಕಳುಹಿಸುವಂತೆ ಸೂಚಿಸಿದರು.
ಖಾಸಗಿ ಸಂಸ್ಥೆಗಳಿಂದ ಭದ್ರತಾ ಸಿಬ್ಬಂದಿಯವರನ್ನು ನೇಮಿಸಿಕೊಳ್ಳುವಾಗ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ (Police Verification) ವನ್ನು ಸಲ್ಲಿಸಿದವರನ್ನು ಮಾತ್ರ ನೇಮಿಸಿಕೊಳ್ಳತಕ್ಕದ್ದು.
ಎಲ್ಲಾ ಬ್ಯಾಂಕ್, ಕೋ-ಆಪರೇಟಿವ್ ಸೊಸೈಟಿ, ಹಣಕಾಸು ಸಂಸ್ಥೆಗಳಲ್ಲಿ ಸೈಬರ್ ಅಪರಾಧಗಳ ಕುರಿತ ಪೊಸ್ಟರ್ಗಳನ್ನು ತಮ್ಮ ಬ್ಯಾಂಕ್ ಆವರಣಗಳಲ್ಲಿ ಕಡ್ಡಾಯವಾಗಿ ಅಳವಡಿಸತಕ್ಕದ್ದು. ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಕೂಡ ಭದ್ರತೆಯ ದೃಷ್ಠಿಯಿಂದ ಹೆಚ್ಚಿನ ಗಸ್ತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. ತುರ್ತು ಸಂದರ್ಭದಲ್ಲಿ ಸಹಾಯವಾಣಿ 112ಗೆ ಕರೆಮಾಡಿ ತಮ್ಮ ದೂರುಗಳನ್ನು ಸಲ್ಲಿಸುವಂತೆ ಪೊಲೀಸ್ ಕಮಿಷನರ್ ಅವರು ಸೂಚನೆ ಕೊಟ್ಟರು.
ಈ ಸಂದರ್ಭದಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಇದ್ದರು.







