ಜೇವರ್ಗಿ | ಪ್ರಥಮ ದರ್ಜೆ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ

ಜೇವರ್ಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾನ್ ಮಾನವತಾವಾದಿ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರ 893ನೇ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಪ್ರಾಂಶುಪಾಲೆ ಡಾ. ಶಾಂತಾ ಅಸ್ಟಿಗೆ ಮಾತನಾಡಿ, ಬಸವಣ್ಣನು ವರ್ಣಭೇದ, ವರ್ಗಭೇದ ಹಾಗೂ ಲಿಂಗಭೇದಗಳನ್ನು ವಿರೋಧಿಸಿ ಸಮಾನತೆಯ ಸಂದೇಶ ಸಾರಿದ ಮಹಾನ್ ಚಿಂತಕ ಎಂದು ಹೇಳಿದರು. ಮನುಷ್ಯನು ಸತ್ಯನಿಷ್ಠೆಯಿಂದ ಶುದ್ಧ ಕಾಯಕ ಮಾಡಬೇಕು ಎಂಬ ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಖಾಜಾವಲಿ ಈಚನಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನು ಸಮಾನ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕ್ರಾಂತಿಕಾರಿ ನಾಯಕರು. ಅವರ ವಚನಗಳಲ್ಲಿ ವ್ಯಕ್ತವಾದ ತತ್ವಗಳು ಭಾರತೀಯ ಸಂವಿಧಾನದಲ್ಲಿಯೂ ಪ್ರತಿಬಿಂಬಿತವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ. ಸಂದೀಪ್ ತಿವಾರಿ, ಸಹ ಸಂಯೋಜಕ ಡಾ.ರವೀಂದ್ರ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್, ಅತಿಥಿ ಉಪನ್ಯಾಸಕ ಡಾ.ನಾಗನಗೌಡ, ಜಯಪ್ರಕಾಶ್ ಬಿರಾದಾರ್ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶರಣಪ್ಪ ಗುಂಡಗುರ್ತಿ ವಂದಿಸಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರು, ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.






