ಬಸವೇಶ್ವರ ವೃತ್ತದ ಅಭಿವೃದ್ಧಿಗೆ ಬದ್ಧ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ (ಸೇಡಂ) : ಬಹು ದಿನಗಳ ಬೇಡಿಕೆ ಹಾಗೂ ನಗರ ಸೌಂದರ್ಯಕ್ಕೆ ಪುಷ್ಠಿ ನೀಡುವಂತಹ ಬಸವೇಶ್ವರ ವೃತ್ತದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ. ಬೇಕಾದ ಕ್ರಮಗಳನ್ನು ಅನುಸರಿಸಿ ದುರಸ್ತಿ ಕೈಗೊಂಡು ಬಸವೇಶ್ವರ ವೃತ್ತವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಸೇಡಂ ಪಟ್ಟಣ್ಣದ ಬಸವೇಶ್ವರ ವೃತ್ತಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವಾಸ್ತು ತಜ್ಞ ಬಸರಾಜಪ್ಪ ಖಂಡೇರಾವ್ ಅವರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಸೇಡಂ ಪಟ್ಟಣದ ಹೃದಯ ಭಾಗದಲ್ಲಿ ಸ್ಥಾಪಿತವಾಗಿರುವ ಅಣ್ಣ ಬಸವಣ್ಣ ಅವರ ಅಶ್ವಾರೂಢ ಮೂರ್ತಿ ಹಾಗೂ ಅದರ ಸುತ್ತಲಿನ ಸ್ಥಳದ ಸೌಂದರ್ಯ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ತಜ್ಞ ಖಂಡೇರಾವ್ ಅವರೊಟ್ಟಿಗೆ ಚರ್ಚಿಸಿದಂತೆ ಫ್ಲೋರಿಂಗ್, ಹಿಂಭಾಗ ಗೋಡೆ ಹಾಗೂ ಬಸವೇಶ್ವರ ಮೂರ್ತಿ ಸ್ಥಳದ ಸುತ್ತಲಿನ ಗ್ರ್ಯಾನೇಟ್ ದುರಸ್ತಿ ಕೈಗೊಳ್ಳಬೇಕಾಗಿದೆ ಎಂದರು.
ಈ ವೇಳೆ ಮುಖಂಡರಾದ ಬಸವರಾಜ ಪಾಟೀಲ ಊಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ ಬೊಮ್ಮನಹಳ್ಳಿ, ಕೃಷಿ ಸಮಾಜದ ಅಧ್ಯಕ್ಷ ಬಸವರಾಜ ರೇವಗೊಂಡ, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರು, ಶಿವರುದ್ರ ಕೊಳಕುರು, ಸತೀಶ್ ಪೂಜಾರಿ, ಸಂತೋಷ ತಳವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸೇಡಂ ಪಟ್ಟಣದ ಬಸವೇಶ್ವರ ವೃತ್ತ ಸೇರಿದಂತೆ ಅಂಬಿಗ ಚೌಡಯ್ಯ, ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಳದ ಅಭಿವೃದ್ಧಿಯನ್ನು ಕೈಗೊಳ್ಳುವ ಕುರಿತು ವಾಸ್ತು ತಜ್ಞರೊಟ್ಟಿಗೆ ಚರ್ಚಿಸಿದ್ದೇನೆ. ಬರುವ ದಿನಗಳಲ್ಲಿ ಬೇಕಾದ ಅನುದಾನ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು ಈ ಮೂರು ಸ್ಥಳಗಳ ಅಭಿವೃದ್ಧಿಪಡಿಸಲಾಗುವುದು.
-ಡಾ.ಶರಣಪ್ರಕಾಶ್ ಪಾಟೀಲ್ (ಸಚಿವ)







