ಭೀಮಣ್ಣ ಖಂಡ್ರೆ ನಿಧನದಿಂದ ಸಮಾಜಕ್ಕೆ ತುಂಬಲಾಗದ ನಷ್ಟ: ಮೃತ್ಯುಂಜಯ್ ಹಿರೇಮಠ

ಶಹಾಬಾದ: ನೂರಾಮೂರು ವರ್ಷಗಳ ಸಾರ್ಥಕ ಹಾಗೂ ತುಂಬು ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಅಗಲಿರುವುದು ವೀರಶೈವ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಮುದಾಯದ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.
ಶನಿವಾರ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಾಜಿ ಶಾಸಕರಾದ ಭೀಮಣ್ಣ ಖಂಡ್ರೆ ಅವರ ನಿಧನದ ನಿಮಿತ್ತ ಆಯೋಜಿದಲಾದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮೃತ್ಯುಂಜಯ್ ಹಿರೇಮಠ, ಭೀಮಣ್ಣ ಖಂಡ್ರೆ ಅವರು ವೃತ್ತಿಯಲ್ಲಿ ವಕೀಲರಾಗಿ ಬಡಜನರಿಗೆ, ರೈತರಿಗೆ ನ್ಯಾಯ ಕೊಡಿಸುವ ಮೂಲಕ ಜನನಾಯಕರಾಗಿ ಹೊರಹೊಮ್ಮಿದ್ದಾರೆ. 1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗಿ, 4 ಬಾರಿ ಶಾಸಕರಾಗಿ, 2 ಬಾರಿ ವಿಧಾನಪರಿಷತ್ ಸದಸ್ಯರಾಗಿ, ಎಂ.ವೀರಪ್ಪ ಮೊಯ್ಲಿ ಅವರ ಸರಕಾರದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರೈತರ ಕಲ್ಯಾಣದ ಬಗ್ಗೆ ಕಳಕಳಿ ಹೊಂದಿದ್ದ ಭೀಮಣ್ಣ ಖಂಡ್ರೆ ಅವರು ಹಳ್ಳಿಖೇಡದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಣಜಿಯ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಈ ವೇಳೆ ಮುಖಂಡರಾದ ಶಿವಕುಮಾರ್ ಇಂಗಿನಶೆಟ್ಟಿ, ಭೀಮಾಶoಕರ್ ಕುಂಬಾರ, ಈರಣ್ಣ ವಾಲಿ, ಶರಣಬಸಪ್ಪ ಕೋಬಳ, ರಾಜು ಬೆಳಗುಂಪಿ, ಚನ್ನಪ್ಪ ಕುಂಬಾರ, ರಾಜಶೇಖರ ಘಂಟಿಮಠ, ಶರಣು ಜೆರಟಗಿ, ರಾಜೇಶ್ವರಿ ಧನಶೆಟ್ಟಿ, ಜಯಶ್ರೀ ಪಸಾರ, ಮಹಾನಂದ ಕಂಬಾರ, ಆರತಿ ಸಾತ್ಯಾಳ, ಜಗದೇವಿ ಬೆಳಗುಂಪಿ ಸೇರಿದಂತೆ ಸಮಾಜದ ಹಿರಿಯ ಮುಂಖಡರು ಉಪಸ್ಥಿತರಿದ್ದರು.





