ಬರ ಘೋಷಣೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ಗೂಂಡಾಗಿರಿ ಖಂಡನೀಯ: ಕೆ.ನೀಲಾ

ಕಲಬುರಗಿ: ಬರಪೀಡಿತ ಪ್ರದೇಶ ಘೋಷಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರು ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿ, ದಾಂಧಲೆ ಹಾಗೂ ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಂಡಿರುವುದು ಖಂಡನೀಯ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಬಿಜೆಪಿ ನಾಯಕರು ಪ್ರತಿಭಟನೆಯ ಹೆಸರಿನಲ್ಲಿ ಶಾಂತಿ ಕದಡುವ ಹಾಗೂ ಗಲಭೆಯ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ನಾಗರಿಕರೊಂದಿಗೆ ಅನಾಗರಿಕವಾಗಿ ವರ್ತಿಸಲಾಗಿದೆ. ವಾಹನ ಸವಾರರ ಹೆಲ್ಮೆಟ್ ಕಿತ್ತುಕೊಂಡು ಒಡೆದು ಹಾಕಲಾಗಿದೆ. ಆಟೋ ಚಾಲಕರನ್ನು ನಿಂದಿಸಿ ವಾಹನದ ಕೀ ಕಿತ್ತುಕೊಳ್ಳಲಾಗಿದೆ. ಮತ್ತೊಂದು ವಾಹನದ ಟೈರ್ನ ಗಾಳಿ ತೆಗೆದಿರುವುದಲ್ಲದೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಅವರತ್ತ ನೀರಿನ ಬಾಟಲ್ ಎಸೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ಘಟನೆಗಳು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿವೆ. ಜನರ ಸಮಸ್ಯೆಗಳ ಕುರಿತು ಶಾಂತಿಯುತವಾಗಿ ಹೋರಾಟ ನಡೆಸುವ ಬದಲು ನಾಗರಿಕರಿಗೆ ತೊಂದರೆ ನೀಡುವುದು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಕೆ. ನೀಲಾ ತಿಳಿಸಿದ್ದಾರೆ.
ಬರಪೀಡಿತ ಜಿಲ್ಲೆ ಘೋಷಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳೂ ಪ್ರಮುಖವಾಗಿವೆ ಎಂಬುದು ಬಿಜೆಪಿಯ ನಾಯಕರಿಗೂ ತಿಳಿದಿದೆ. ಆದರೂ ತಮ್ಮದೇ ಕೇಂದ್ರ ಸರ್ಕಾರದ ಜವಾಬ್ದಾರಿಗಳ ಬಗ್ಗೆ ಮಾತನಾಡದೆ, ಜನರ ಸಂಕಷ್ಟವನ್ನು ರಾಜಕೀಯವಾಗಿ ಬಳಸಿಕೊಂಡು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ಜನರ ಹಸಿವು, ಬಡತನ ಹಾಗೂ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಜನರನ್ನು ಹಿಂಸೆಯತ್ತ ಹಾಗೂ ಕೋಮು ಪ್ರಚೋದನೆಯತ್ತ ಕೊಂಡೊಯ್ಯುವ ಪ್ರವೃತ್ತಿ ಖಂಡನೀಯ. ಶಾಂತಿ, ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಬೇಕಾದ ಚುನಾಯಿತ ಪ್ರತಿನಿಧಿಗಳೇ ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಂಡಿರುವುದು ಆತಂಕಕಾರಿ,” ಎಂದು ಕೆ. ನೀಲಾ ಹೇಳಿದ್ದಾರೆ.






