ಕಾಂಗ್ರೆಸ್ ದುರಾಡಳಿತದ ವಿರುದ್ಧ ಬಿಜೆಪಿಯಿಂದ ಹೋರಾಟ : ರಾಜಕುಮಾರ್ ಪಾಟೀಲ್

ಸೇಡಂ : ಕ್ಷೇತ್ರದಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತ, ಶಾಸಕರ ನಿಷ್ಕ್ರಿಯತೆ ಹಾಗೂ ಜನವಿರೋಧಿ ಧೋರಣೆಗಳನ್ನು ಖಂಡಿಸಿ ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಘೋಷಿಸಿದರು.
ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ ಕರಡು ಮತದಾರರ ಪಟ್ಟಿ ವಿತರಣೆ ಹಾಗೂ ಬಿಎಲ್ಎ 2 ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿಯ ಮೂಲಸೌಕರ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆಯೊಂದಿಗೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಇತ್ತೀಚಿಗೆ ರಂಜೋಳದಲ್ಲಿ ಭಜನೆ ಮಾಡಲು ಹೋದರೆ ಅದನ್ನು ಗೂಂಡಾಗಿರಿ, ಭಯದ ವಾತಾವರಣ ಸೃಷ್ಟಿ ಎಂದು ಬಿಂಬಿಸಲಾಯಿತು. ಆದರೆ ವಾಸ್ತವದಲ್ಲಿ ಲಾಠಿ, ಕಟ್ಟಿಗೆ ಹಾಗೂ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಗೂಂಡಾಗಿರಿ ಮಾಡಿದ್ದು ಕಾಂಗ್ರೆಸ್ನವರು. ಗೂಂಡಾಗಿರಿ ಮಾಡುವುದೇ ಕಾಂಗ್ರೆಸ್ನ ಸಂಸ್ಕೃತಿ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ತೇಲ್ಕೂರ್ ಖಾರವಾಗಿ ತಿರುಗೇಟು ನೀಡಿದರು. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇಂತಹ ದುರಾಡಳಿತ ಮತ್ತು ತುಷ್ಟೀಕರಣ ನೀತಿಯನ್ನು ಜನತೆಯ ಮುಂದೆ ಬಯಲು ಮಾಡಲಾಗುವುದು ಎಂದರು.
ಪಕ್ಷದಲ್ಲಿ ಯಾವುದೇ ವ್ಯಕ್ತಿಪೂಜೆ ಅಥವಾ ಪ್ರತ್ಯೇಕ ಬಣಗಳಿಗೆ ಅವಕಾಶವಿಲ್ಲ, ನಾವೆಲ್ಲರೂ ಕೇವಲ ಬಿಜೆಪಿ ಬಣದಡಿ ಕಾರ್ಯನಿರ್ವಹಿಸಬೇಕು. ಯಾರೊಬ್ಬರೂ ಜಾತಿಯ ಆಧಾರದ ಮೇಲೆ ಟಿಕೆಟ್ ಅಥವಾ ಸ್ಥಾನಮಾನ ನಿರೀಕ್ಷಿಸದೆ, ಸರ್ವ ಜನಾಂಗದ ನಾಯಕರಾಗಿ ಬೆಳೆಯಬೇಕು. ಗ್ರಾಮ ಮಟ್ಟದಲ್ಲಿ ನಡೆಯುವ ಸಾರ್ವಜನಿಕ ಸಮಸ್ಯೆಗಳ ಪರಿಹಾರ ಹಾಗೂ ನ್ಯಾಯ-ಪಂಚಾಯಿತಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಮುಂಚೂಣಿಯಲ್ಲಿದ್ದು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಸೇಡಂ ಮಂಡಲ ಪ್ರಭಾರಿ ಸಿದ್ದಾಜಿ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಶಿವಶರಣಪ್ಪ ಶಂಕರ್ ಮೆಡಿಕಲ್, ನಾಗರೆಡ್ಡಿ ಪಾಟೀಲ ದೇಶಮುಖ ಮದನಾ, ಅನೀಲ ಪಾಟೀಲ ತೆಲ್ಕೂರ, ಸಂತೋಷಿರಾಣಿ ಪಾಟೀಲ ತೆಲ್ಕೂರ, ವಿಜಯಕುಮಾರ್ ಆಡಕಿ, ನಾಗರೆಡ್ಡಿ ಪಾಟೀಲ ಮುಧೋಳ, ಸಿದ್ದು ಬಾನಾರ ಕೋಡ್ಲಾ, ಮಹಾದೇವಪ್ಪ ಗೋಣಿ, ಬಸವರಾಜ ಪಾಟೀಲ ದೇವನೂರು, ಶಿವಕುಮಾರ ತೊಟ್ನಳ್ಳಿ, ರಾಮು ಕಣೇಕಲ್, ವಿನೋದ ಸಾಹುಕಾರ್, ನಾಗಪ್ಪ ಕೊಳ್ಳಿ, ಪಂಡರಿ ಮುನಿ ಇಟಕಾಲ, ಅಬ್ದುಲ್ ಜಾಫರ್, ಭೀಮು ನಾಯಕ ಹೂಡಾ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.






