ಕಲಬುರಗಿಗೆ ಬಿಜೆಪಿಗರ ಕೊಡುಗೆ ಶೂನ್ಯ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ : ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿಗರ ಕೊಡುಗೆ ಶೂನ್ಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಪ್ರಭಾವ ಇರುವ ಪ್ರದೇಶವಾಗಿರುವ ಕಾರಣಕ್ಕೆ ಬಿಜೆಪಿ ಯಾವುದೇ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡುತ್ತಿಲ್ಲ. ಉತ್ತಮ ವಿಮಾನ ನಿಲ್ದಾಣಕ್ಕಾಗಿ ನೂರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದೇವೆ. ಆದರೆ ವಿಮಾನ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೂ, ವಿಶೇಷವಾಗಿ ಕಲಬುರಗಿಗೂ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಆಕ್ಷೇಪಿಸಿದರು.
56 ಸಾವಿರ ಹುದ್ದೆಗಳ ಭರ್ತಿ :
ಖಾಲಿ ಹುದ್ದೆಗಳ ಕುರಿತು ಮಾತನಾಡಿದ ಸಚಿವರು, ಸರ್ಕಾರದ ಮೊದಲ ಆದ್ಯತೆ ಖಾಲಿ ಹುದ್ದೆಗಳ ಭರ್ತಿ ಆಗಿದೆ. ಒಟ್ಟು 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ 5 ಸಾವಿರ ಶಿಕ್ಷಕರು ಸೇರಿದಂತೆ ಸುಮಾರು 30 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಯುವನಿಧಿ ಯೋಜನೆ
ಯುವನಿಧಿ ಯೋಜನೆಯಡಿ ಈಗಾಗಲೇ ನಾಲ್ಕು ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 2.70 ಲಕ್ಷ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಜಮೆಯಾಗುತ್ತಿದೆ. ಉಳಿದವರು ಅರ್ಹತಾ ಮಾನದಂಡ ಪೂರೈಸದ ಹಿನ್ನೆಲೆಯಲ್ಲಿ ಹಣ ಪಡೆಯಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.







