Chincholi | ಭೂಮಾನಂದ್ ಹತ್ಯೆ ಖಂಡಿಸಿ ಬಿಎಸ್ಪಿ ಪ್ರತಿಭಟನೆ; ಆರೋಪಿಗಳ ಬಂಧನಕ್ಕೆ ಆಗ್ರಹ

ಚಿಂಚೋಳಿ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಜಿಲ್ಲಾ ಉಸ್ತುವಾರಿಯಾಗಿದ್ದ ಭೂಮಾನಂದ್ ಅವರ ಹತ್ಯೆಯನ್ನು ಖಂಡಿಸಿ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಆಗಸ್ಟ್ 4ರಂದು ಸಂಜೆ ಭೂಮಾನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪಕ್ಷದ ಮುಖಂಡರು, ಪ್ರಕರಣದ ಸಮಗ್ರ ತನಿಖೆ ನಡೆಸಿ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಕಾನೂನಿನ ವ್ಯಾಪ್ತಿಯಲ್ಲಿ ಶೀಘ್ರ ನ್ಯಾಯ ದೊರಕುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಬಿಎಸ್ಪಿ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ, ಭೂಮಾನಂದ್ ಹತ್ಯೆ ಪ್ರಕರಣವನ್ನು ತ್ವರಿತಗತಿಯಲ್ಲಿ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ–ಸೇಡಂ ಉಸ್ತುವಾರಿ ಗೌತಮ್ ಬೊಮ್ಮನಹಳ್ಳಿ, ವಿಧಾನಸಭಾ ಕ್ಷೇತ್ರ ಅಧ್ಯಕ್ಷ ವೈಜನಾಥ ಬೀರಪ್ಪ ಮಿತ್ರ, ಉಪಾಧ್ಯಕ್ಷ ರಮೇಶ್ ದೊಡ್ಡಿಕೊಳ್ಳ, ನಗರಾಧ್ಯಕ್ಷ ಅಕ್ಷಯಕುಮಾರ್ ಬೊಮ್ಮನಹಳ್ಳಿ, ಸುಲೇಪೇಟ್ ಹೋಬಳಿ ಅಧ್ಯಕ್ಷ ರಾಹುಲ್ ಯಾಕಾಪುರ, ಐನೋಳ್ಳಿ ಹೋಬಳಿ ಅಧ್ಯಕ್ಷ ಚಂದ್ರಶೇಖರ್ ಕೈತಾಪುರ್, ರಮೇಶ್ ದುಡ್ಡಿಕೊಳ್ಳ, ಚೇತನ್ ನಿರಳಕರ್, ಶರಣು, ರೇವಣಸಿದ್ಧ ಬೀರನಹಳ್ಳಿ, ಗುಂಡಪ್ಪ ಮೇತ್ರಿ, ಸಂಜು ಮೇತ್ರಿ, ಅಂಬು ಬೋವಿ, ಉಮೇಶ್ ಪೂಜಾರಿ, ರಾಮು ಬೋವಿ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






