Chincholi | ರಕ್ತದಾನವು ಜೀವದಾನಕ್ಕೆ ಸಮಾನ : ಡಾ.ಮುಹಮ್ಮದ್ ಗಫಾರ್

ಚಿಂಚೋಳಿ : ರಕ್ತದಾನವು ಜಗತ್ತಿನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾದದ್ದು. ಇಂತಹ ರಕ್ತದಾನ ಶಿಬಿರಗಳು ಹೆಚ್ಚಾದಾಗ ಮಾತ್ರ ತುರ್ತು ಸಂದರ್ಭದಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮುಹಮ್ಮದ್ ಗಫಾರ್ ಹೇಳಿದರು.
ತಾಲ್ಲೂಕಿನ ಕೊಂಚವರಾಮ್ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮಾಜ ಸೇವಕ ಅಶೋಕ ಮೊಗದಂಪೂರ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕರ ಸಹೋದರರಾದ ರಾಜಾ ಸಂತೋಷ ನಾಯಕ ರಕ್ತದಾನ ಮಾಡುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ ಡಾ.ಗಫಾರ್ ಅವರು, ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ವ್ಯಕ್ತಿ ಹೆಚ್ಚು ಚೈತನ್ಯದಿಂದಿರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರಕ್ತದಾನದ ಕುರಿತು ಜನರಲ್ಲಿ ಇರುವ ಅನಗತ್ಯ ಭಯವನ್ನು ದೂರ ಮಾಡಿ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದೆ ಬರಬೇಕು. “ಪ್ರತಿ ಹನಿ ರಕ್ತವೂ ಮತ್ತೊಬ್ಬರ ಜೀವ ಉಳಿಸುವ ಅಮೂಲ್ಯ ಕೊಡುಗೆ” ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಬಾಲಾಜಿ, ಸಮಾಜ ಸೇವಕ ಅಶೋಕ ಮೊಗದಂಪೂರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗೋಪಾಲ ಹಾಗೂ ರಮೇಶ, ಅಮರ್ ಲೋಡನೂರ, ಎಂಡಿ ರಿಯಾಜ್, ಮಹ್ಮದ ಖದೀರ್, ಸುರೇಂದ್ರ ಸೇರಿದಂತೆ ಹಲವು ಗಣ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ರಕ್ತದಾನವು ಕೇವಲ ಒಂದು ದಾನವಲ್ಲ, ಅದು ರೋಗಿಗಳಿಗೆ ಮರುಜನ್ಮ ನೀಡುವ ಶ್ರೇಷ್ಠ ಸಂಪ್ರದಾಯ. ಈ ಜೀವ ಉಳಿಸುವ ಕಾಯಕಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು.
-ಡಾ.ಮುಹಮ್ಮದ್ ಗಫಾರ್ (ತಾಲೂಕಾ ಆರೋಗ್ಯಾಧಿಕಾರಿ)






